ಹಾಸನ : ಜಿಲ್ಲೆಯ ಬೇಲೂರು ತಾಲ್ಲೂಕಿನ ದೊಡ್ಡಮೇದೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ದರೋಡೆ ಶೈಲಿಯ ಕಳ್ಳತನದಲ್ಲಿ ಕಳ್ಳರು ಲಕ್ಷಾಂತರ ಮೌಲ್ಯದ ನಗದು, ಕಾರು ಹಾಗೂ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಮಾಹಿತಿ ಪ್ರಕಾರ, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷರ ಮನೆಯಲ್ಲಿ ಹಿಂಭಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯ ಹಾಲ್ನಲ್ಲಿ ಇಡಲಾಗಿದ್ದ ₹70 ಸಾವಿರ ನಗದು, ಸ್ಯಾಮ್ಸಂಗ್ ಕಂಪನಿಯ ಎರಡು ಮೊಬೈಲ್ ಫೋನ್ಗಳು, ಅದೇ ಕಂಪನಿಯ ವಾಚ್ ಕಳವುಗೈದಿದ್ದಾರೆ.
ಇದೇ ವೇಳೆ ಮನೆಯ ಮುಂಭಾಗ ನಿಲ್ಲಿಸಲಾಗಿದ್ದ KA-46-M-6503 ನಂಬರ್ನ ಇನ್ನೋವಾ ಕಾರುವನ್ನು ಕಳ್ಳರು ಕದ್ದೊಯ್ದು, ಅದರೊಳಗೆ ಇಡಲಾಗಿದ್ದ ₹4.5 ಲಕ್ಷ ನಗದು ಮತ್ತು ಎಟಿಎಂ ಕಾರ್ಡ್ಗಳನ್ನು ಸಹ ಕಳವು ಮಾಡಿದ್ದಾರೆ.
ಕೈಗಳಲ್ಲಿ ಗ್ಲೌಸ್ ಧರಿಸಿ, ಮುಖ ಮುಚ್ಚಿಕೊಂಡು ನಾಲ್ಕು-ಐದು ಮಂದಿ ಕಳ್ಳರು ಕೃತ್ಯ ಎಸಗಿದ ದೃಶ್ಯ ಮನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಸುದ್ದಿ ತಿಳಿದ ತಕ್ಷಣ ಬೇಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತೀವ್ರ ತನಿಖೆ ಕೈಗೊಂಡಿದ್ದಾರೆ.










