
Hassan ಹಾಸನದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ. ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಗೆಲುವು, ಉಚಿತ ಗ್ಯಾರಂಟಿ ಸವಾಲು ಹಾಗೂ ಕಾಂಗ್ರೆಸ್ನ ದ್ವಿಮುಖ ನೀತಿಯ ಬಗ್ಗೆ ತೀವ್ರ ವಾಗ್ದಾಳಿ.
Hassan,ಹಾಸನ,ಮೇ,08,2026(www.kannadapost.com): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಭರ್ಜರಿ ಗೆಲುವು, ಉಚಿತ ಗ್ಯಾರಂಟಿಗಳ ಸವಾಲು ಹಾಗೂ ಕಾಂಗ್ರೆಸ್ ಪಕ್ಷದ ಅವಕಾಶವಾದಿ ರಾಜಕಾರಣದ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯದ ಹಲವು ವಿದ್ಯಮಾನಗಳ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಹಂಚಿಕೊಂಡರು.
*ವಿಜಯ್ ಗೆಲುವಿನ ನಿರೀಕ್ಷೆ ಇತ್ತು, ಆದರೆ ಗ್ಯಾರಂಟಿ ಕಥೆ ಏನು?*
“ಕಳೆದ 50 ವರ್ಷಗಳಿಂದ ಎರಡು ದ್ರಾವಿಡ ಪಕ್ಷಗಳ ಆಡಳಿತವನ್ನು ನೋಡಿದ್ದ ತಮಿಳುನಾಡು ಜನತೆ, ಒಂದು ಹೊಸ ವ್ಯವಸ್ಥೆ ತರಲು ನಿರ್ಧರಿಸುತ್ತಾರೆ ಎಂಬ ನಿರೀಕ್ಷೆ ನನಗಿತ್ತು. ತಮಿಳುನಾಡು ರಾಜಕಾರಣದಲ್ಲಿ ಸಿನಿಮಾದ ಪ್ರಭಾವ ಮೊದಲಿನಿಂದಲೂ ಇದೆ. ಹೀಗಾಗಿ ಹೊಸ ಮುಖಕ್ಕೆ ಅವಕಾಶ ನೀಡಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರಲಿದೆ ಎಂದು ಮಾಧ್ಯಮಗಳು ಹೇಳುತ್ತಿದ್ದವು. ಆದರೆ, ವಿಜಯ್ ಅವರ ಈ ಮಟ್ಟದ ಸಾಧನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಇದೊಂದು ಅಚ್ಚರಿಯ ಫಲಿತಾಂಶ,” ಎಂದು ಕುಮಾರಸ್ವಾಮಿ ಬಣ್ಣಿಸಿದರು.
ಆದರೆ, ವಿಜಯ್ ಘೋಷಿಸಿರುವ ಉಚಿತ ಗ್ಯಾರಂಟಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, “ವಿಜಯ್ ಅವರಿಗೆ ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಲು ಯಾರು ಪ್ರಭಾವ ಬೀರಿದರೋ ಗೊತ್ತಿಲ್ಲ. ಆ ರಾಜ್ಯದ ಒಟ್ಟು ಬಜೆಟ್ ವರ್ಷಕ್ಕೆ 3.40 ಲಕ್ಷ ಕೋಟಿ ರೂ. ಇದೆ. ಆದರೆ, ಅವರು ಘೋಷಿಸಿರುವ ಉಚಿತ ಗ್ಯಾರಂಟಿಗಳನ್ನು ಈಡೇರಿಸಲು 6 ರಿಂದ 7 ಲಕ್ಷ ಕೋಟಿ ರೂ. ಬೇಕು. ಅದ್ಯಾವ ರೀತಿ ಹಣ ಹೊಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ದೇವರೇ ಅವರನ್ನು ಕಾಪಾಡಬೇಕು,” ಎಂದು ವ್ಯಂಗ್ಯವಾಡಿದರು.
*ಡಿಎಂಕೆ-ಎಐಎಡಿಎಂಕೆ ಮೈತ್ರಿ ಕೇವಲ ಊಹಾಪೋಹ*
“ತಮಿಳುನಾಡು ರಾಜ್ಯಪಾಲರು ಕಾನೂನು ಪಂಡಿತರಿಂದ ಮಾಹಿತಿ ಪಡೆದು ಸ್ಪಷ್ಟ ಬಹುಮತದ ಸಂಖ್ಯೆಯನ್ನು ಗಮನಕ್ಕೆ ತನ್ನಿ ಎಂದಿದ್ದಾರೆ. ಆದರೆ, ಡಿಎಂಕೆ ಮತ್ತು ಎಐಎಡಿಎಂಕೆ ಎರಡು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡುತ್ತವೆ ಎಂಬುದು ನನ್ನ ರಾಜಕೀಯ ಅನುಭವದಲ್ಲಿ ಊಹಾಪೋಹದ ಸುದ್ದಿ. ಇಂತಹ ಸುದ್ದಿ ಬಂದಿರುವುದೇ ತಪ್ಪು,” ಎಂದು ಸ್ಪಷ್ಟಪಡಿಸಿದರು.










