ಹಾಸನ : 24ರಂದು ನಿಮ್ಮ ಶಕ್ತಿ ಪ್ರದರ್ಶಿಸಿ – ಜೆಡಿಎಸ್ ಕಾರ್ಯಕರ್ತರಿಗೆ ಹೆಚ್.ಡಿ.ದೇವೇಗೌಡ ಕರೆ

ಹಾಸನ : ಹಾಸನದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ಹೆಚ್.ಡಿ. ದೇವೇಗೌಡ (ಹೆಚ್ಡಿಡಿ) ಅವರು ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹೆಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದು, ಒಂದು ಬಾರಿ ಬಿಜೆಪಿ ಹಾಗೂ ಇನ್ನೊಂದು ಬಾರಿ ಕಾಂಗ್ರೆಸ್ ಸಹವಾಸದಲ್ಲಿ ಸರ್ಕಾರ ನಡೆಸಿದ್ದರು. ಕಾಂಗ್ರೆಸ್ ಜೊತೆ ಮತ್ತೆ ಸಿಎಂ ಆಗುವುದು ಬೇಡ ಎಂದು ಆಗಲೇ ತೀರ್ಮಾನಿಸಿದ್ದೆ ಎಂದು ಹೆಚ್ಡಿಡಿ ಹೇಳಿದರು.

ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದ ಅವಧಿಯಲ್ಲಿ 26 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದು, ಪಂಚರತ್ನ ಕಾರ್ಯಕ್ರಮ ರೂಪಿಸಿ ಜನಪರ ಆಡಳಿತ ನೀಡಿದ್ದಾರೆ. ದಿನಕ್ಕೆ 12 ಗಂಟೆಗಳ ಕಾಲ ನಿರಂತರವಾಗಿ ಸಭೆ ನಡೆಸುತ್ತಿದ್ದರು. ಅವರ ಕಾರ್ಯಕ್ರಮಗಳಿಗೆ ಅಪಾರ ಜನಸಾಗರವೇ ಸಾಕ್ಷಿ ಎಂದು ಹೆಚ್ಡಿಡಿ ಹೇಳಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಈಗ ಕಾಂಗ್ರೆಸ್ ಪಕ್ಷದವರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ನಿರ್ಮಾಣಕ್ಕೆ ಹಣವಿಲ್ಲ ಎಂದು ಅವರದೇ ನಾಯಕರು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಕೇಂದ್ರ ಸರ್ಕಾರದ ಮೇಲೆ ನಿರಂತರ ಟೀಕೆ ಮಾಡುತ್ತಿರುವ ಕಾಂಗ್ರೆಸ್, ಮಹಾತ್ಮ ಗಾಂಧಿ ಹೆಸರಿನ ಮನರೇಗಾ ಯೋಜನೆಗೆ ಹೆಸರು ಬದಲಾಯಿಸಿದ್ದಾಗ ತೀವ್ರ ವಿರೋಧ ವ್ಯಕ್ತಪಡಿಸಿತ್ತು ಎಂದು ನೆನಪಿಸಿದರು.

ಇದೀಗ ಕಾಂಗ್ರೆಸ್‌ಗೆ ಮಹಾತ್ಮ ಗಾಂಧಿ ಮೇಲಿನ ಪ್ರೀತಿ ಹೊಸದೇನಲ್ಲ. ಇಂದಿರಾ ಗಾಂಧಿ ಪ್ರಧಾನಿಯಾದ ನಂತರ ಮಹಾತ್ಮ ಗಾಂಧಿಯವರನ್ನೇ ಮರೆತುಬಿಟ್ಟಿದ್ದರು ಎಂದು ವ್ಯಂಗ್ಯವಾಡಿದರು. ಇಡೀ ರಾಜ್ಯದಲ್ಲಿ ಜೆಡಿಎಸ್ ಮತ್ತಷ್ಟು ಗಟ್ಟಿಯಾಗಿದ್ದು, ಜನವರಿ 24ರಂದು ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಪ್ರಮುಖ ಮುಖಂಡರ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಸುಮಾರು 2 ಲಕ್ಷ ಮಂದಿ ಸೇರುವ ನಿರೀಕ್ಷೆಯಿದ್ದು, 50 ಎಕರೆ ಜಾಗದಲ್ಲಿ ಕಾರ್ಯಕ್ರಮ ಆಯೋಜಿಸಲು ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಚೆನ್ನೈನಿಂದಲೇ ಫೋನ್ ಮಾಡಿ, ಜನವರಿ 24ರಂದು ನಿಮ್ಮ ಶಕ್ತಿಯನ್ನು ನೀವೇ ಪ್ರದರ್ಶಿಸಬೇಕು ಎಂದು ಕಾರ್ಯಕರ್ತರು ಹಾಗೂ ಮುಖಂಡರಿಗೆ ಕರೆ ನೀಡಿದ್ದಾರೆ ಎಂದು ಹೆಚ್ಡಿಡಿ ತಿಳಿಸಿದರು.