ಹಾಸನ: ನಿರೀಕ್ಷೆ ಫೌಂಡೇಶನ್ ವತಿಯಿಂದ ಇದೇ ತಿಂಗಳ 7 ರಂದು ನಗರದಲ್ಲಿ ಹಾಸನ ವಾಕಥಾನ್ ನಡಿಗೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಸುಭಾಷ್ ಮತ್ತು ಸ್ವಯಂ ಸೇವಕ ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆ 14 ವರ್ಷದಿಂದ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದೆ. ಉತ್ತಮ ರಸ್ತೆ, ಸಂಸ್ಕೃತಿ ನಿರ್ಮಾಣ, ರಸ್ತೆ ಸುರಕ್ಷತೆ, ಟ್ರಾಫಿಕ್ ನಿಯಮ ಪಾಲನೆ, ಆರೋಗ್ಯ ಜಾಗೃತಿ, ಸ್ವಚ್ಛ ಹಸಿರು ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇದೀಗ ಮನಸ್ಸಿಗೆ ಚೈತನ್ಯ ನೀಡುವ, ತೂಕ ಇಳಿಸಲು ಪೂರಕವಾದ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ದಿನವಿಡೀ ಚುರುಕುತನ, ಸ್ನಾಯುಬಲಕ್ಕೆ ಪೂರಕವಾದ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 7 ಗಂಟೆಗೆ ನಡಿಗೆ ಹಾಸನಾಂಬ ಒಳಾಂಗಣ ಕ್ರೀಡಾಂಗಣ ಬಳಿಯಿಂದ ಆರಂಭವಾಗಲಿದೆ. ಸುಮಾರು 3 ಕಿಮೀ ಸಂಚರಿಸಲಿದೆ. ಟಾಪ್ 50 ವಾಕರಿಗೆ ಪದಕ ನೀಡಲಾಗುವುದು ಎಂದರು.
ಅಂದಿನ ವಾಕಥಾನ್ಗೆ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಬಲ ಇದೆ. ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಬನ್ನಿ ನಡೆಯೋಣ, ಆರೋಗ್ಯವಂತರಾಗೋಣ ಎಂದು ಮನವಿ ಮಾಡಿದರು.










