ದೊಡ್ಡಬಳ್ಳಾಪುರ ತಾಲ್ಲೂಕಿನ ಖಾಸಗಿ ರೆಸಾರ್ಟ್ನಲ್ಲಿ ಜನ್ಮದಿನ ಆಚರಣೆಗೆ ಬಂದಿದ್ದ 20 ವರ್ಷದ ಯುವಕ ಅಭಿಲಾಷ್ ಈಜುಕೊಳದಲ್ಲಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
doddaballapur,ದೊಡ್ಡಬಳ್ಳಾಪುರ,ಮೇ,20,2026(www.kannadapost.com): ಸ್ನೇಹಿತನ ಜನ್ಮದಿನಕ್ಕಾಗಿ ಖಾಸಗಿ ರೆಸಾರ್ಟ್ಗೆ ಬಂದಿದ್ದ ಯುವಕನೊಬ್ಬ ನಿದ್ದೆಗಣ್ಣಿನಲ್ಲಿ ಈಜುಕೊಳಕ್ಕೆ ಬಿದ್ದು ಮೃತಪಟ್ಟಿರುವ ಪ್ರಕರಣ ತಾಲ್ಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚರಮಂಗನಹಳ್ಳಿ ಗ್ರಾಮದ ಅಭಿಲಾಷ್ (20) ಮೃತ ಯುವಕ. ಮೇ 17ರಂದು ಸ್ನೇಹಿತರ ಗುಂಪೊಂದು ಜನ್ಮದಿನ ಆಚರಣೆಗೆಂದು ಕೋಲಾರದಿಂದ ತಾಲ್ಲೂಕಿನ ಖಾಸಗಿ ರೆಸಾರ್ಟ್ಗೆ ಬಂದಿತ್ತು. ಮೇ 18 ಮಧ್ಯರಾತ್ರಿ ಸ್ನೇಹಿತನ ಜನ್ಮದಿನ ಆಚರಿಸಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಬಳಿಕ ಎಲ್ಲರೂ ಕೊಠಡಿಗಳಲ್ಲಿ ಮಲಗಿದ್ದರು. ಈ ವೇಳೆ ಅಭಿಲಾಷ್ ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಕೊಠಡಿಯಿಂದ ಹೊರ ಹೋಗಿದ್ದ. ಆದರೆ, ಬಹಳ ಸಮಯವಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಸ್ನೇಹಿತರು ರೆಸಾರ್ಟ್ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಕತ್ತಲಿನಲ್ಲಿ ಯುವಕ ಪತ್ತೆಯಾಗಿರಲಿಲ್ಲ. ನಂತರ ರೆಸಾರ್ಟ್ ಮಾಲೀಕರಿಗೂ ಮಾಹಿತಿ ನೀಡಿದ್ದಾರೆ.
ಬೆಳಗ್ಗೆ ರೆಸಾರ್ಟ್ ಸಿಬ್ಬಂದಿ ಈಜುಕೊಳದಲ್ಲಿ ಯುವಕನ ಶವ ತೇಲುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಹೊಸಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಳ್ಳಲಾಗಿದೆ.










