ಹಾಸನ : ಹಾಸನದ ಜಿ.ಪಂ. ಹೊಯ್ಸಳ ಸಭಾಂಗಣದಲ್ಲಿ ನಡೆಯುತ್ತಿರುವ ಜಿಲ್ಲಾ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಭೆಗೆ ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಸಿ.ಎನ್. ಬಾಲಕೃಷ್ಣ, ಎಚ್.ಕೆ. ಸುರೇಶ್, ಡಿಸಿ ಕೆ.ಎಸ್. ಲತಾ ಕುಮಾರಿ, ಎಸ್ಪಿ ಮಹಮದ್ ಸುಜೀತಾ, ಸಿಇಓ ಪೂರ್ಣಿಮಾ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.
ಸಭೆಯ ಆರಂಭದಲ್ಲೇ ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳ ಕೆಲಸದ ಶೈಲಿಯ ಬಗ್ಗೆ ಕಿಡಿಕಾರಿದರು.“ಜನಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಾವುದೇ ಗಂಭೀರತೆ ಕಾಣಿಸುತ್ತಿಲ್ಲ. ಬಂದ ಅನುದಾನ ಖರ್ಚು ಮಾಡುವುದನ್ನೇ ಅಭಿವೃದ್ಧಿ ಅಂದುಕೊಂಡಿದ್ದೀರಾ? ನಾಲ್ಕು ಫೋಟೋ ತೆಗೆಸಿಕೊಂಡು ಕಾರ್ಯಕ್ರಮ ಮಾಡಿದ್ದೇವೆ ಎಂದು ಹೇಳುವುದು ಅಭಿವೃದ್ಧಿಯಲ್ಲ,” ಎಂದು ಸಚಿವ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳ ವರದಿಗೆ ಅಸಮಾಧಾನಗೊಂಡ ಸಚಿವರು,
“ನಾನು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರ ಕೊಡಿ. ಸುತ್ತಿ ಬಳಸಿ ಆರೈಕೆ ಉತ್ತರ ಕೊಡುವುದು ಬೇಡ. ನನಗೆ ಗಿರಕಿ ಹೊಡೆಸಲು ಹೋದರೆ ಅದು ನನಗೂ ಒಳ್ಳೆಯದಲ್ಲ, ನಿಮಗೂ ಒಳ್ಳೆಯದಲ್ಲ,” ಎಂದು ಎಚ್ಚರಿಕೆ ನೀಡಿದರು.










