ಚನ್ನರಾಯಪಟ್ಟಣ: ನವೆಂಬರ್ ತಿಂಗಳಲ್ಲಿ ಹಾಸನದಲ್ಲಿ ನಡೆಯುವ ಸಿಐಟಿಯುನ 16ನೇ ರಾಜ್ಯ ಸಮ್ಮೇಳನದ ಯಶಸ್ಸಿಗೆ ಸಾರ್ವಜನಿಕರ ಸಹಾಯ ಕೋರಿ ತಾಲ್ಲೂಕಿನ ಹಿರೀಸಾವೆಯಲ್ಲಿ ಸಿಐಟಿಯ ಸದಸ್ಯರು ನಿಧಿ ಸಂಗ್ರಹ ಜಾಥಾ ನಡೆಸಿದರು.
ತಾಲ್ಲೂಕಿನ ಹಿರೀಸಾವೆ ಗ್ರಾಮದ ಶ್ರೀಕಂಠಯ್ಯ ವೃತ್ತದ ಚೌಡೇಶ್ವರಿ ಮಹಾದ್ವಾರದ ಬಳಿಯಿಂದ ಮೆರವಣಿಗೆ ಪ್ರಾರಂಭವಾಗಿ, ಶ್ರವಣಬೆಳಗೊಳರಸ್ತೆ, ಬಿ.ಎಂ.ರಸ್ತೆ, ಗ್ರಾಮ ಪಂಚಾಯಿತಿ ರಸ್ತೆ ಸೇರಿದಂತೆ ವಿವಿಧ ಬೀದಿಗಳಲ್ಲಿ ಸಾಗಿತು.
ಸಿಐಟಿಯು ಹಿರೀಸಾವೆ ಹೋಬಳಿ ಘಟಕದ ಅಧ್ಯಕ್ಷ ಜಯಶಂಕರ್ ಮಾತನಾಡಿ, ನ.13 ರಿಂದ 15 ರವರೆಗೆ ಮೂರು ದಿನಗಳ ರಾಜ್ಯ ಸಮ್ಮೇಳನ ಹಾಸನದ ಡಾ.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಅಂಗನವಾಡಿ, ಗ್ರಾಮ ಪಂಚಾಯಿತಿ, ಬಿಸಿಯೂಟ, ವಿದ್ಯಾರ್ಥಿನಿಲಯ, ಆಸ್ಪತ್ರೆಗಳು ಮತ್ತು ಖಾಸಗಿ ಕಂಪನಿಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮತ್ತು ವಿವಿಧ ಅಸಂಘಟಿತ ಕಾರ್ಮಿಕರು ಮತ್ತು ಸಂಘಗಳ ಪದಾಧಿಕಾರಿಗಳು ಭಾಗ-ವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಮ್ಮೇಳನದ ಯಶಸ್ವಿಗೆ ಹೆಚ್ಚಿನ ಆರ್ಥಿಕ ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ ಎಂದರು.
ಜಾಥಾದ ನೇತೃತ್ವವನ್ನು ಹೋಬಳಿಯ ಗ್ರಾಮ ಪಂಚಾಯಿತಿ ಸಿಬ್ಬಂದಿ ವಹಿಸಿದ್ದರು. ಜಿಲ್ಲಾ ಮತ್ತು ತಾಲ್ಲೂಕಿನ ಸಿಐಟಿಯು ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.










