ಚನ್ನರಾಯಪಟ್ಟಣ ,ಫೆಬ್ರವರಿ,24,2026(www.kannadapost.com): ತಾಲ್ಲೂಕಿನಾದ್ಯಂತ ಈ ಬಾರಿ ಮಾವಿನ ಮರಗಳು ಹೂವುಗಳಿಂದ ಮೈದುಂಬಿಕೊಂಡಿದ್ದು, ನಿರೀಕ್ಷೆ ಮೀರಿದಂತೆ ಉತ್ತಮ ಫಸಲು ಹಿಡಿಯುವ ಸಾಧ್ಯತೆ ಇದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಡಿಸೆಂಬರ್ ತಿಂಗಳಿನಿಂದಲೇ ಮಾವಿನ ಮರಗಳಲ್ಲಿ ಹೂವು ಬಿಡುವ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಸಣ್ಣ ಕಾಯಿ-ಕುಸುರಿಗಳಾಗಿ ಫಸಲು ಕಾಣಿಸುತ್ತಿದೆ.
ವಿವಿಧ ತಳಿಗಳಲ್ಲಿ ಉತ್ತಮ ಉತ್ಪಾದನೆ ನಿರೀಕ್ಷೆ
ನಾಟಿ ಸೇರಿದಂತೆ ರಸಪುರಿ, ಬಾದಾಮಿ, ಮಲ್ಲಿಕಾ, ತೋತಾಪುರಿ ಸೇರಿದಂತೆ ವಿವಿಧ ತಳಿಗಳ ಮಾವಿನ ಮರಗಳಲ್ಲಿ ಉತ್ತಮ ಉತ್ಪಾದನೆ ದೊರೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಸ್ಥಳೀಯ ಬೆಳೆಗಾರರು ತಿಳಿಸಿದ್ದಾರೆ.
ಕಳೆದ ವರ್ಷ ಅಕಾಲಿಕ ಅಳಿಕಲ್ಲು ಮಳೆ, ವಾತಾವರಣ ವ್ಯತ್ಯಯ, ಹೂವು ಉದುರುವುದು ಹಾಗೂ ಕೀಟ ಬಾಧೆಯಿಂದ ರೈತರು ನಷ್ಟ ಅನುಭವಿಸಿದ್ದರು. ಆದರೆ ಈ ಬಾರಿ ಉತ್ತಮ ಹವಾಮಾನದಿಂದ ಉತ್ತಮ ಫಸಲು ನಿರೀಕ್ಷಿಸಲಾಗಿದೆ ಎಂದು ಪಿ.ಹೊಸಹಳ್ಳಿ ಗ್ರಾಮದ ರೈತ ಎಚ್.ಕೆ. ಗೋವಿಂದರಾಜು ಸಂತಸ ವ್ಯಕ್ತಪಡಿಸಿದರು.
ಗುತ್ತಿಗೆದಾರರ ಚಟುವಟಿಕೆ ಆರಂಭ
ಮಾವಿನ ಹಣ್ಣುಗಳ ವ್ಯಾಪಾರಸ್ಥರು, ಗುತ್ತಿಗೆದಾರರು ಹಾಗೂ ಮಧ್ಯವರ್ತಿಗಳು ರೈತರನ್ನು ಸಂಪರ್ಕಿಸಿ ಮುಂಗಡ ಹಣ ನೀಡಿ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಭೀತಿ ಇರುವುದರಿಂದ ಸರ್ಕಾರ ಕೂಡಲೇ ಮಾವು ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ವಗರಹಳ್ಳಿ ಗ್ರಾಮದ ಸಾವಯವ ಕೃಷಿಕ ಪ್ರವೀಣ್ ಒತ್ತಾಯಿಸಿದ್ದಾರೆ.
ತೋಟಗಾರಿಕೆ ಇಲಾಖೆಯ ಸಲಹೆಗಳು
ತಾಲೂಕಿನಲ್ಲಿ ಸುಮಾರು 170 ಎಕರೆ ಪ್ರದೇಶದಲ್ಲಿ 8,500 ಮಾವಿನ ಮರಗಳಿವೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
ತೋಟಗಾರಿಕೆ ಇಲಾಖೆ ಸೂಚನೆಗಳು:
-
ಹೂವಿನ ಹಂತದಲ್ಲಿ ಕೀಟನಾಶಕ ಸಿಂಪಡಿಸಬಾರದು
-
ಪರಾಗಸ್ಪರ್ಶ ನಡೆಯುವ ಹಂತದಲ್ಲಿ ಜಾಗೃತಿ ಅಗತ್ಯ
-
ಕಾಯಿ ಕಟ್ಟುವ ಹಂತದಲ್ಲಿ ತಜ್ಞರ ಸಲಹೆ ಪಡೆಯಬೇಕು
-
ಹನಿ ನೀರಾವರಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು
-
ಹಣ್ಣು ಮಾಗಿಸುವ ಸೌಲಭ್ಯಗಳನ್ನು ಇಲಾಖೆಯಿಂದ ಪಡೆಯಬೇಕು
ಪ್ರಭಾರಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ಆರ್. ಶಿವಕುಮಾರ್ ರೈತರಿಗೆ ಸೂಕ್ತ ತಾಂತ್ರಿಕ ಮಾರ್ಗದರ್ಶನ ಪಡೆಯುವಂತೆ ಸೂಚಿಸಿದ್ದಾರೆ.
ಸರ್ಕಾರದ ಗಮನ ಅಗತ್ಯ
ಈ ಬಾರಿ ಉತ್ತಮ ಫಸಲು ಸಾಧ್ಯತೆ ಇರುವ ಹಿನ್ನೆಲೆ ಸರ್ಕಾರ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಬೆಂಬಲ ಬೆಲೆ ನಿಗದಿ ಪಡಿಸಬೇಕು ಎಂಬುದು ರೈತರ ಆಗ್ರಹವಾಗಿದೆ.










