ಚನ್ನರಾಯಪಟ್ಟಣ: ತರಹೇವಾರಿ ಗೌರಿ-ಗಣೇಶ ಮೂರ್ತಿಗಳು ಸಿದ್ಧತೆ

ಚನ್ನರಾಯಪಟ್ಟಣ: ಹಿಂದೂ ಸಾಂಪ್ರದಾಯಿಕ ಹಬ್ಬ ಗಣೇಶ ಚತುರ್ಥಿ ಸಮೀಪಿಸುತಿದ್ದಂತೆಯೇ ವಿಶೇಷ, ವಿಶಿಷ್ಟ ಶೈಲಿ ಹಾಗೂ ತರಾವರಿ ಮಾದರಿಯ ಗೌರಿ-ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಕಲಾವಿದರು ತೊಡಗಿಕೊಂಡಿದ್ದಾರೆ.

ಪಿಒಪಿ ಹಾಗೂ ಇತರೆ ಕೆಮಿಕಲ್ ಬಳಕೆಯಿಂದ ಮೂರ್ತಿಗಳನ್ನು ತಯಾರು ಮಾಡುವುದು ಮತ್ತು ಬಳಕೆ ಮಾಡುವುದನ್ನು ಸರ್ಕಾರ ನಿಷೇಧಿಸಿದ್ದು ಪರಿಸರ ಸ್ನೇಹಿ ಮೂರ್ತಿಗಳನ್ನು ಪೂಜಿಸುವಂತೆ ಆದೇಶಿಸಿರುವುದರಿಂದ ಮಣ್ಣಿನಿಂದ ಮಾಡಿರುವ ಗೌರಿ-ಗಣೇಶ ಮೂರ್ತಿಗಳಿಗೆ ಸಾಕಷ್ಟು ಬೇಡಿಕೆ ಇದೆ.

ಈಗಾಗಲೇ ತಾಲ್ಲೂಕು ಕೇಂದ್ರ ಸೇರಿದಂತೆ ವ್ಯಾಪ್ತಿಯ ಹೋಬಳಿ ಕೇಂದ್ರಗಳಲ್ಲಿ ಶಿಲ್ಪಿಗಳು ವಿಭಿನ್ನ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತಲ್ಲೀನರಾಗಿದ್ದಾರೆ. ಅದರಂತೆಯೇ ತಾಲ್ಲೂಕಿನ ಹಿರೀಸಾವೆ ಗ್ರಾಮದ ಎಸ್.ಆರ್.ಮೋಹನ್ ಅವರು ಕಳೆದ ೩ ತಿಂಗಳಿಂದ ವಿಶೇಷ ಹಾಗೂ ವಿಶಿಷ್ಟ ಶೈಲಿಯ ಗೌರಿ ಹಾಗೂ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ಸುಮಾರು ೩೦ ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆಯನ್ನೇ ಕಾಯಕ ಮಾಡಿಕೊಂಡಿರುವ ಶಿಲ್ಪಿ ಎಸ್.ಆರ್.ಮೋಹನ್ ಅವರು ತಯಾರಿಸಿರುವ ಗೌರಿ-ಗಣೇಶ ಮೂರ್ತಿಗಳು ಮಂಡ್ಯ, ನಾಗಮಂಗಲ, ತುಮಕೂರು, ತುರುವೇಕೆರೆ, ಹೊಳೆನರಸೀಪುರ ಹಾಗೂ ಅರಸೀಕೆರೆ ಸೇರಿದಂತೆ ಹೊರ ರಾಜ್ಯ ಆಂದ್ರ ಪ್ರದೇಶಕ್ಕೂ ಕೊಂಡೊಯ್ದಿರುವುದು ವಿಶೇಷವಾಗಿದೆ.

ಒಂದು ಅಡಿಯಿಂದ ಗ್ರಾಹಕರ ಬೇಡಿಕೆಯಂತೆ ಸುಮಾರು ೧೨ ಅಡಿ ಎತ್ತರದ ಮೂರ್ತಿಗಳು ಇವರ ಕೈಚಳಕದಲ್ಲಿ ಮೂಡಿ ಬರಲಿವೆ. ೨೫೦ ರೂ. ನಿಂದ ೩೦ ಸಾವಿರ ರೂ. ವರಗಿನ ಬೆಲೆಯ ಮೂರ್ತಿಗಳು ಇವರಲ್ಲಿ ದೊರೆಯಲಿವೆ.
ಮೂರ್ತಿಗಳ ತಯಾರಿಕೆಗೆ ಹದವಾದ ಜೆಡಿಮಣ್ಣು ಮೊದಲೆಲ್ಲ ತಾಲೂಕು ವ್ಯಾಪ್ತಿಯ ಕೆಲವೇ ಕೆಲ ಕೆರೆಗಳಲ್ಲಿ ಸಿಗುತಿತ್ತು. ಆದರೆ ಏತನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ವಿಚಾರ ತಿಳಿದು ರೈತರು ಜೆಸಿಬಿ ಯಂತ್ರ ಬಳಕೆ ಮಾಡಿಕೊಂಡು  ಟ್ಯಾಕ್ಟರ್ ಗಳ ಮೂಲಕ ಕೆರೆಗಳ ಮೇಲ್ಮಣ್ಣನ್ನು ಸಂಪೂರ್ಣವಾಗಿ ಹೂಳು ತೆಗೆದು ಕೃಷಿ ಜಮೀನುಗಳಿಗೆ ಸಾಗಿಸಲಾಗಿದೆ.