ಚನ್ನರಾಯಪಟ್ಟಣ: ಜ.6 ರಂದು ‘ನಮಗೂ ಬದುಕು ಕೊಡಿ’ ಪರಿಸರ ಸ್ನೇಹಿ ನಾಟಕ ಪ್ರದರ್ಶನ

An eco-friendly drama performance titled 'Give Us Life' has been organized on January 6th at Hassanamba Kala Kshetra Vedike in collaboration with Pratima Trust (R.) and the Department of Kannada and Culture.

ಚನ್ನರಾಯಪಟ್ಟಣ: ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್(ರಿ.) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜ.6 ರಂದು ಹಾಸನದ ಹಾಸನಾಂಬ ಕಲಾ ಕ್ಷೇತ್ರ ವೇದಿಕೆಯಲ್ಲಿ ‘ನಮಗೂ ಬದುಕು ಕೊಡಿ’ ಎಂಬ ಪರಿಸರ ಸ್ನೇಹಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಪ್ರತಿಮಾ ಟ್ರಸ್ಟ್ ಅಧ್ಯಕ್ಷ ಉಮೇಶ್ ತೆಂಕನಹಳ್ಳಿ ಹೇಳಿದರು.

ಜ.6 ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ತಣ್ಣೀರುಹಳ್ಳ ಮಠದ ಮಠಾಧೀಶರಾದ ಶ್ರೀ ವಿಜಯಕುಮಾರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಚಾಲನೆ ನೀಡಲಿದ್ದಾರೆ ಎಂದರು.

ಪ್ರಕೃತಿಗೆ ಸಂಬಂಧಪಟ್ಟ ವಿಚಾರಗಳನ್ನು ಒಳಗೊಂಡಿರುವ ಪರಿಸರ ಸ್ನೇಹಿ ಕಥೆ ಇದಾಗಿದೆ. ಪ್ರತಿಮಾ ಟ್ರಸ್ಟ್ ಅಧ್ಯಕ್ಷ ಉಮೇಶ್ ತೆಂಕನಹಳ್ಳಿ ಅವರು ನಾಟಕ ರಚನೆ ಮತ್ತು ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿಸಿದರು.

ಶಾರದಮ್ಮ ಮತ್ತು ಸುಮ ಅವರು ಹಿನ್ನೆಲೆ ಸಂಗೀತ ನೀಡಲಿದ್ದು, ಎ.ಎಲ್. ನಾಗೇಶ್ ಮತ್ತು ಮಮತಾ ಹಿನ್ನೆಲೆ ವಾದ್ಯ ನುಡಿಸಲಿದ್ದಾರೆ, ಡಿ.ಜಗದೀಶ್ ಚಂದ್ರ ಮತ್ತು ಸುಜಾತ ಅವರು ವಸ್ತ್ರ ವಿನ್ಯಾಸ ಜವಾಬ್ದಾರಿ ನಿರ್ವಹಿಸಲಿದ್ದು, ಸುರೇಶ್ ಅತ್ನಿ ಮತ್ತು ಹೆಚ್.ಎನ್.ದೇವರಾಜು ರಂಗ ಸಜ್ಜಿಕೆ ರೂಪಿಸಲಿದ್ದಾರೆ. ಶಿಲ್ಪ ಮತ್ತು ನಿರ್ಮಲ ಪ್ರಸಾದನ ವ್ಯವಸ್ಥೆ ಮಾಡಲಿದ್ದು, ಶಾಡ್ರಾಕ್.ಪಿ ಅವರು ಬೆಳಕಿನ ನಿರ್ವಹಣೆ ಮಾಡಲಿದ್ದಾರೆ ಎಂದರು.

ವಿಶೇಷ ಆಹ್ವಾನಿತರಾಗಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎನ್.ಬಲರಾಮ, ರಂಗಕರ್ಮಿ ಪ್ರಸಾದ್ ರಕ್ಷಿದಿ ಹಾಗೂ ಹಾಸನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ತಾರಾನಾಥ್ ಹಾಗೂ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

An eco-friendly drama performance titled ‘Give Us Life’ has been organized on January 6th at Hassanamba Kala Kshetra Vedike in collaboration with Pratima Trust (R.) and the Department of Kannada and Culture.