ಚನ್ನರಾಯಪಟ್ಟಣ: ಬೈಕ್ ಮತ್ತು ಮಾರುತಿ ಸುಜುಕಿ ಬಲೆನೋ ಕಾರ್ ನಡುವೆ ಅಪಘಾತ ನಡೆದಿದ್ದು ಒಬ್ಬ ಯುವಕ ಮೃತಪಟ್ಟು ಮತ್ತೊಬ್ಬ ಯುವಕ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹಿರೀಸಾವೆಯಲ್ಲಿ ಮಂಗಳವಾರ ನಡೆದಿದೆ.
ತಾಲ್ಲೂಕಿನ ಹಿರೀಸಾವೆ ಗ್ರಾಮದ ಅಮ್ಮಕುಟೀರ ಬಡಾವಣೆಯ ವಾಸಿ ಮಟನ್ ಬಾಬುರವರ ಪುತ್ರ ಇಸ್ಮಾಯಿಲ್ (22) ಮೃತಪಟ್ಟ ಯುವಕ. ಮುನ್ನಾರವರ ಪುತ್ರ ಸಲ್ಮಾನ್ ತೀವ್ರವಾಗಿ ಗಾಯಗೊಂಡಿದ್ದು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ
ಈ ಇಬ್ಬರು ಯುವಕರು ಆಣ್ಣತಮ್ಮಂದಿರ ಮಕ್ಕಳಾಗಿದ್ದು, ಹಿರೀಸಾವೆಯಲ್ಲಿ ವ್ಯಾಪಾರ ಮಾಡುತ್ತಿದ್ದರು.
ಮಧ್ಯಾಹ್ನ ಊಟಕ್ಕೆಂದು ಮನೆ ಕಡೆಗೆ ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರಿಗೆ ಹಾಸನ ಕಡೆಯಿಂದ ಬಂದ ಬಲೆನೋ ಕಾರು ಡಿಕ್ಕಿ ಹೊಡೆದಿದೆ.
ತಾಲ್ಲೂಕಿನ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










