ಆಲೂರು: ಆಯಸ್ಸು ಒಂದ ಕೋಟಿ ಬಂಗಾರದ ನಾಣ್ಯ ಕೊಟ್ಟರು ಸಿಗುವುದಿಲ್ಲ. ಆದ್ದರಿಂದ ಅಮೂಲ್ಯವಾದ ಆಯಸ್ಸಿನ ಕ್ಷಣವನ್ನು ಯಾರೊಬ್ಬರೂ ವ್ಯರ್ಥ ಮಾಡಿಕೊಳ್ಳಬಾರದು ಎಂದು ಉತ್ತರಪ್ರದೇಶ ಕಾಶಿ ಪೀಠದ ಶ್ರೀಜ್ಞಾನ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿಯಲ್ಲಿರುವ ಶ್ರೀಮದ್ ರಂಭಾಪುರಿ ವೀರಾ ಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಲಿಂಗೈಕ್ಯ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳವರ 47 ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ ಶ್ರೀಗಳವರ ಪಟ್ಟಾಧಿಕಾರದ ಐದನೇ ವಾರ್ಷಿಕೋತ್ಸವ-ಜನ್ಮ ವರ್ಧಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಹಿತ ಚಿಂತನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬ ಮನುಷ್ಯನಿಗೂ ಭಗವಂತನು ಅಮೂಲ್ಯವಾದ ಒಂದು ನೂರು ವರ್ಷದ ಆಯಸ್ಸನ್ನು ಅನುಗ್ರಹಿಸಿರುತ್ತಾರೆ.
ಪ್ರತಿಯೊಬ್ಬರು ತನ್ನ ಆಯಸ್ಸನ್ನು ಆತ್ಮಕಲ್ಯಾಣಕ್ಕಾಗಿ ಮತ್ತು ಲೋಕಸೇವಗಾಗಿ ಬಳಸಬೇಕು ಕಳೆದ ಐದು ವರ್ಷಗಳಿಂದ ಕಾರ್ಜುವಳ್ಳಿಯ ಶ್ರೀಗಳು ಸಾಧಿಸಿದ ಸಾಧನೆ ಅಪೂರ್ವವಾದದ್ದು ಭಗವಂತನು ಇವರಿಗೆ ಪೂರ್ಣ ಆಯಸ್ಸು ಮತ್ತು ಆರೋಗ್ಯವನ್ನು ಅನುಗ್ರಹಿಸಲಿ ಇದರಿಂದ ಇನ್ನೂ ಹೆಚ್ಚು ಸಮಾಜಸೇವೆ ನೆರವೇರಲಿ ಎಂದು ಶುಭ ಹಾರೈಸಿದರು. ಧರ್ಮ ಮಾರ್ಗದಲ್ಲಿ ನಡೆದರೆ ಎಲ್ಲರ ಬದುಕು ಹಸನಾಗಿರುತ್ತದೆ.
ಸಕಲ ಜೀವಿಗೆ ಸಾವು ಕಟ್ಟಿಟ್ಟ ಬುತ್ತಿ. ಪರಸ್ಪರ ಮಮತೆ, ವಾತ್ಸಲ್ಯಗಳಿಂದ ಬಂಧುತ್ವ ಬೆಳಸಿಕೊಳ್ಳಬೇಕು. ಮಾನವರಲ್ಲಿ ರಾಕ್ಷ ಸಿ ಗುಣ ಕಳೆದು ಮದ, ಮತ್ಸಾರ್ಯ ನಶಿಸಿದರೆ ಧರ್ಮಾಚರಣೆ ಕಡೆ ಒಲವು ಮೂಡುತ್ತದೆ. ದೇವರ ಆರಾಧನೆಯೊಂದೆ ಮೋಕ್ಷ ಕ್ಕೆ ದಾರಿ. ದೇವರಿದ್ದಾನೆ ಎಂದು ಅರಿತು ಬದುಕು ಕಟ್ಟಿಕೊಳ್ಳಬೇಕು. ಹಸಿದಾಗ ಊಟ ಮಾಡುವುದು ಪ್ರಕೃತಿಯಾದರೆ, ಹಸಿವಾಗದೆ ಇದ್ದರೂ ತಿನ್ನುವುದು ವಿಕೃತಿಯಾಗುತ್ತದೆ. ಅಳತೆ ಮೀರಿ ಸಂಗ್ರಹಿಸಿದ ಸಂಪತ್ತು ಮುಂದೊಂದು ದಿನ ಕುತ್ತು ತರುತ್ತದೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿರುವ ಶ್ರೀ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಆರ್ಶೀವಚನ ನೀಡುತ್ತಾ. ಪ್ರತಿಯೊಬ್ಬರು ಉತ್ತಮವಾದ ಸಂಸ್ಕಾರ ಬೆಳೆಸಿಕೊಂಡು ಧರ್ಮದ ಹಾದಿಯಲ್ಲಿ ನಡೆದಾಗ ಸಾರ್ಥಕತೆ ಹೊಂದಲು ಸಾಧ್ಯವಾಗುತ್ತದೆ. ಧರ್ಮ ಎಂಬುದು ಸತ್ಯ, ಪ್ರಾಮಾಣಿಕ ಹಾದಿಯಲ್ಲಿ ಸಾಗುವ ದಾರಿಯಾಗಿದೆ. ಬದುಕಿನಲ್ಲಿ ಸಾಧನೆ ಎಂಬುದು ಒಳ್ಳೆತನದ ಹಾದಿಯಲ್ಲಿ ಗಳಿಸಿದ ಶ್ರೇಷ್ಠತೆಯಾಗಿದೆ.
ಮನುಷ್ಯ ಮನುಷ್ಯನನ್ನು ಪ್ರೀತಿಯಿಂದ ಕಾಣಬೇಕು. ಆಗ ಜೀವನ ಸಾರ್ಥಕವಾಗಲಿದೆ. ಭಕ್ತಿ ಮಾರ್ಗದಲ್ಲಿ ಸಾಗಿದಾಗ ಮನಸ್ಸಿನಲ್ಲಿ ಚಂಚಲತೆ ಬಾರದು. ಮನುಷ್ಯನ ಮನಸ್ಸು ತಿಳಿಯಾಗಿರಬೇಕು. ಬದುಕಿನಲ್ಲಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಕಲಿಸುವ ಪಾಠವು ಜೀವನದುದ್ದಕ್ಕೂ ಇರುತ್ತದೆ ಹಾಗಾಗಿ ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ಸಾಗಿದರೆ ಬದುಕು ಹಸನಾಗುತ್ತದೆ ಎಂದರು.
ವೇದಿಕೆಯ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಜನ್ಮ ವಧಂತಿಯ ಅಂಗವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಶ್ರೀ ಇಷ್ಯನಾಗ-ಸಿದ್ದಿನಾಗ-ಮುಕ್ತಿನಾಗ ದೇವರ ಸನ್ನಿಧಿಯಲ್ಲಿ ಹಾಗೂ ಶ್ರೀಮಠದ ಹಿರಿಯ ಶ್ರೀಗಳವರ ಸನ್ನಿಧಿಯಲ್ಲಿ ಪರಮಾನ್ನ ಅಭಿಷೇಕ, ಅಷ್ಟೋತ್ತರ ಅರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ನಡೆದು ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ದುರ್ಗಾಸೂಕ್ತ ಪಾರಾಯಣಪೂರ್ದಕ ಕ್ಷೀರಾಭಿಷೇಕ, ಮಲ್ಲಿಕಾಪುಷ್ಪಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ಶ್ರೀ ಲಲಿತಾ ಸಹಸ್ರ ನಾಮಾವಳಿ ಪಾರಾಯಣ ಪೂರ್ವಕ ಶ್ರೀ ಚಕ್ರಕ್ಕೆ ಸದಸ್ಯರಿಂದ ಲಕ್ಷಕುಂಕುಮಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ನಡೆಯಿತು ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಜನ್ಮ ವಧಂತಿಯ ಅಂಗವಾಗಿ ಅಡ್ಡ ಪಲ್ಲಕ್ಕಿ ಉತ್ಸವ ನೆರವೇರಿತು.
ಇದೇ ಸಂದರ್ಭದಲ್ಲಿ ಶ್ರೀ ಮಠದಿಂದ ನೀಡುವ ಧರ್ಮ ಹಿತ ಚಿಂತಕ ಪ್ರಶಸ್ತಿಯನ್ನು ಆಲೂರು ತಾಲೂಕು ವೀರಶೈವ ಲಿಂಗಾಯತ ಸಂಘದ ಖಜಾಂಚಿ ವೈ.ಬಿ ಟೀಕರಾಜು ದಂಪತಿಗಳಿಗೂ ಮತ್ತು ಶ್ರೀ ಮಠದಿಂದ ನೀಡುವ ಗೌರವ ಗುರು ರಕ್ಷೆಯನ್ನು ನಾಕಲಗೂಡಿನ ರುದ್ರಮ್ಮ ಸಣ್ಣ ತಮ್ಮಯ್ಯ, ನೀಡಲೂರಿನ ತೀರ್ಥ ಸಂಗಪ್ಪ, ತಗರೆಯ ರೇಣುಕ, ಆನಗಳಲೆಯ ಕುಮಾರ್, ಕಾರ್ಜುವಳ್ಳಿಯ ರುದ್ರೇಗೌಡ, ರಂಗೇನಹಳ್ಳಿಯ ಉಮೇಶ್, ಮಲ್ಲಿಕಾರ್ಜುನಾಪುರದ ಚೇತನ್, ಶ್ರೀಮಠದ ಭೂಮಿಕ, ಪ್ರದೀಪ, ಭಾವಸವಳ್ಳಿ ರವಿಕುಮಾರ್, ಕಾರ್ಜುವಳ್ಳಿಯ ಶೀಲಾ ಬಸಂತ್, ದೇವಿಕಾ ಕುಮಾರ್, ಸುಮಾ ಮತ್ತು ಪ್ರದೀಪ್ ರವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗದಗಿನ ನರಸಾಪುರ ಶ್ರೀ ಡಾ. ವೀರೇಶ್ವರ ಸ್ವಾಮಿಗಳು, ಕೊಡ್ಲಿಪೇಟೆಯ ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ನಾಗವಂದ ಹೊರಗಿನ ಮಠದ ಶ್ರೀ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಹೆಗ್ಗಡಿಹಳ್ಳಿಯ ಶ್ರೀ ಷಡ್ಭಾವರಹಿತೇಶ್ವರ ಶಿವಾಚಾರ್ಯ ಸ್ವಾಮಿಗಳು, ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದ ಉತ್ತರಾಧಿಕಾರಿ ಚೇತನ ದೇವರು, ತಹಸಿಲ್ದಾರ್ ಮಲ್ಲಿಕಾರ್ಜುನ್, ನಿವೃತ್ತ ಮುಖ್ಯ ಕಾರ್ಯನಿರ್ವಣ ಅಧಿಕಾರಿ ಕಾಂತರಾಜು, ಆಲೂರು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್ ಮಹೇಶ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಪರಮೇಶ್ ನವಿಲೆ, ಉಪಾಧ್ಯಕ್ಷ ಯತೀಶ್ ಸಕಲೇಶಪುರ, ಹಾಸನ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ನಿರ್ದೇಶಕ ಶಾಂತರಾಜ್ ಕೆರೆಹಳ್ಳಿ, ಬೆಂಗಳೂರು ವೀರೆನ ಇಂಡಿಯಾ ಡೈರೆಕ್ಟರ್ ಬಿ.ಎಸ್ ನವೀನ್ ಕುಮಾರ್, ಹಾಸನ ಆಸ್ಪತ್ರೆ ಸಹ ಪ್ರಾಧ್ಯಾಪಕ ಮಧು, ಬಿಜೆಪಿ ಆಲೂರು ಮಂಡಲ ನಿಕಟಪೂರ್ವ ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜ್, ನಗರಾಧ್ಯಕ್ಷ ಲೋಹಿತ್, ಪೊಲೀಸ್ ಸಿಬ್ಬಂದಿ ದಿನೇಶ್, ಬಸವೇಶ್ವರ ವಿದ್ಯಾ ಸಂಸ್ಥೆ ಆಡಳಿತ ಅಧಿಕಾರಿ ದೀಪರಾಜು, ಕಿರಣ್ ಕಾನ್ವೆಂಟಿನ ಸಂಸ್ಥಾಪಕ ಆನಂದ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್. ಎಲ್ ಮಲ್ಲೇಶ್ ಗೌಡ ಮುಂತಾದವರು ಹಾಜರಿದ್ದರು.










