ಹಾಸನ: ನಗರದ ರಿಂಗ್ ರಸ್ತೆ ಬದಿಯ ಚಿಕ್ಕಹೊನ್ನೇನಹಳ್ಳಿ ರಸ್ತೆ ಬಳಿ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಮಹಾನಗರ ಪಾಲಿಕೆ, ಪೌರಾಡಳಿತ ನಿರ್ದೇಶನಾಲಯ, ಸ್ವಚ್ಛ ಭಾರತ್ ಮಿಷನ್ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ ಸಂಯುಕ್ತ ಆಶ್ರಯದಲ್ಲಿ ವಿಶಿಷ್ಟ ಸ್ವಚ್ಛತಾ ಹೀ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೇಯರ್ ಗಿರೀಶ್ ಚನ್ನವೀರಪ್ಪ ನೇತೃತ್ವದಲ್ಲಿ ನಡೆಯಿತು.
ಈ ಶ್ರಮದಾನ ಕಾರ್ಯಕ್ರಮದಲ್ಲಿ ನಗರ ನಿವಾಸಿಗಳು, ಮಹಾನಗರ ಪಾಲಿಕೆಯ ಎಲ್ಲಾ ವಿಭಾಗದ ಸಿಬ್ಬಂದಿ, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸ್ವಯಂ ಸೇವಕರು ಪಾಲ್ಗೊಂಡು ಯಶಸ್ವಿಯಾಗಿ ನೆರವೇರಿಸಿದರು.
ಈ ವೇಳೆ ಮಾತನಾಡಿದ ಗಿರೀಶ್ ಚನ್ನವೀರಪ್ಪ, ಸ್ವಚ್ಛತಾ ಹೀ ಸೇವಾ ಅಭಿಯಾನ, ಏಕ್ ದಿನ, ಏಕ್ ಗಂಟೆ, ಏಕ್ ಸ್ಥಳದಲ್ಲಿ ಎಂಬ ತತ್ವದಡಿ ನಗರವನ್ನು ಸ್ವಚ್ಛಗೊಳಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದರು.
ಸಾರ್ವಜನಿಕರು ತಮ್ಮ ಮನೆಯಲ್ಲಿನ ಕಸವನ್ನು ರಸ್ತೆಗೆ ಎಸೆಯದೆ, ನಿಯಮಿತವಾಗಿ ವಿಲೇವಾರಿ ವಾಹನಗಳ ಮೂಲಕ ಸುರಕ್ಷಿತವಾಗಿ ವಿಲೇವಾರಿಸುವಂತೆ ಮನವಿ ಮಾಡಿದರು.ಪ್ಲಾಸ್ಟಿಕ್ ಬ್ಯಾಗ್ ಬದಲು ಬಟ್ಟೆ ಬ್ಯಾಗ್ ಬಳಸಿ ಕಸ ಸಂಗ್ರಹಿಸುವ ಮೂಲಕ ಮಹಾನಗರ ಪಾಲಿಕೆಗೆ ಸಹಕಾರ ನೀಡಲು ಪ್ರೋತ್ಸಾಹಿಸಿದರು.
ರಸ್ತೆ ಮೇಲೆ ಕಸ ಎಸೆಯುತ್ತಿರುವವರು ವಿದ್ಯಾವಂತರೆ ಎಂಬುದನ್ನು ಮರೆಯಬೇಡಿ. ಮನೆ ಮುಂದೆ ಪ್ರತಿದಿನವೂ ಕಸ ವಿಲೇವಾರಿ ವಾಹನ ಬಂದರೂ ಸಹ ಸಹಕಾರ ನೀಡದವರು, ನಾಗರಿಕ ಜವಾಬ್ದಾರಿ ಮರೆತವರು ಎಂದು ಬೇಸರ ವ್ಯಕ್ತಪಡಿಸಿದರು. ಸ್ವಚ್ಛತೆಯಲ್ಲಿ ಸಹಕಾರ ನೀಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದ್ದು, ನಮ್ಮ ಮನೆ, ನಮ್ಮ ಊರು, ನಮ್ಮ ದೇಶ ಎಂಬ ಭಾವನೆಯೊಂದಿಗೆ ತಮ್ಮ ಪರಿಸರವನ್ನು ಸ್ವಚ್ಛವಾಗಿರಿಸಬೇಕು ಎಂದು ಸಲಹೆ ನೀಡಿದರು.
ಈ ಮೂಲಕ ಸ್ವಚ್ಛತಾ ಹೀ ಸೇವಾ ಅಭಿಯಾನ ನಗರದ ಸಾರ್ವಜನಿಕರ ಗಮನ ಸೆಳೆದಿದ್ದು, ಸ್ಥಳೀಯ ಆಡಳಿತ ಮತ್ತು ನಾಗರಿಕರ ಸಹಯೋಗದಿಂದ ಮುಂದುವರಿದರೆ, ನಗರವನ್ನು ಸ್ವಚ್ಛಗೊಳಿಸುವ ಹಾದಿಯಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.ಇದೇ ವೇಳೆ ಕಸ ವಿಲೆವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲು ಸಹಕಾರ ಕೊಡುವಂತೆ ಮತ್ತೊಮ್ಮೆ ಕೋರಿದರು.
]
ಇದೇ ಸಂದರ್ಭದಲ್ಲಿ ಚಿಕ್ಕಹೊನ್ನೆನಹಳ್ಳಿ ರಸ್ತೆಯ ಉದ್ದಗಲಕ್ಕೂ ಇದ್ದ ಕಸವನ್ನು ಮಹಾಪೌರರಾದ ಗಿರೀಶ್ ಚನ್ನವೀರಪ್ಪ ನೇತೃತ್ವದಲ್ಲಿ ಆಯುಕ್ತ ಕೃಷ್ಣಮೂರ್ತಿ, ಇಂಜಿನಿಯರ್ ಹಾಗೂ ಲಯನ್ಸ್ ಖಜಾಂಚಿ ಹೆಚ್.ಆರ್. ಚನ್ನೇಗೌಡ, ಪರಿಸರ ಪ್ರಭಾರಿ ಇಂಜಿನಿಯರ್ ಕೆ.ಆರ್.ಕವಿತಾ, ಲಯನ್ಸ್ ವಲಯ ಅಧ್ಯಕ್ಷ ಹೆಚ್.ಕೆ. ನಾಗೇಶ್, ರವಿ ನಾಕಲಗೂಡು, ನಗರಸಭೆ ಸಿಬ್ಬಂದಿ, ಸ್ವಯಂ ಸೇವಕರು, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಸೇರಿದಂತೆ ಇತರರು ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.










