ಹಾಸನ: ವಿಪ್ ಉಲ್ಲಂಘನೆ ಮಾಡಿದರೆ ಸದಸ್ಯತ್ವ ಅನರ್ಹಗೊಳ್ಳುವ ಆತಂಕದಿಂದ ನಗರಸಭೆ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ತನ್ನ ವಿರುದ್ಧ ತಾನೇ ಮತ ಚಲಾಯಿಸಿಕೊಂಡ ಘಟನೆಗೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಸಾಕ್ಷಿಯಾಯಿತು.
ಎನ್.ಡಿ.ಎ. ಮೈತ್ರಿಯಂತೆ ಉಪಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದ ಬಿಜೆಪಿ ಶಿಲ್ಪಾವಿಕ್ರಂ ಅವರನ್ನು ಕಣಕ್ಕಿಳಿಸಿ ವಿಪ್ ಜಾರಿ ಮಾಡಿತ್ತು. ಹೀಗಾಗಿ ಎಲ್ಲ ಬಿಜೆಪಿ ಸದಸ್ಯರು ಕಡ್ಡಾಯವಾಗಿ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸಲೇಬೇಕಿತ್ತು. ವಿಪ್ ಉಲ್ಲಂಘಿಸಿದರೆ ಅವರ ಸದಸ್ಯತ್ವ ರದ್ದಾಗು ಅಪಾಯವಿತ್ತು.
ಆದರೆ ಬಿಜೆಪಿಯಿಂದ ಗೆದ್ದು ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದ ಲತಾದೇವಿ ಕೂಡ ಉಪಾಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿ ಉಳಿದಿದ್ದರು. ಅವರಿಗೆ ಜೆಡಿಎಸ್ ಸದಸ್ಯರು ಬೆಂಬಲವಾಗಿದ್ದರು. ಹೀಗಾಗಿ ರಾಜಕೀಯ ಜಾಣ್ಮೆ ಮೆರೆದ ಅವರು ಉಪಾಧ್ಯಕ್ಷ ಸ್ಥಾನದ ಮತದಾನದ ವೇಳೆ ತಮ್ಮ ಎದುರಾಳಿ ಅಭ್ಯರ್ಥಿ ಶಿಲ್ಪಾ ಪರ ಕೈ ಎತ್ತಿ ಮತ ಚಲಾಯಿಸಿದರು. ಇದರಿಂದ ವಿಪ್ ತೂಗುಗತ್ತಿಯಿಂದ ಬಚಾವಾದರು.
ಅತ್ತ ಜೆಡಿಎಸ್, ಪಕ್ಷೇತರರು ಹಾಗೂ ಶಾಸಕರ ಬೆಂಬಲದಿಂದ 21 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.










