
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ 94ನೇ ಹುಟ್ಟುಹಬ್ಬದ ಅಂಗವಾಗಿ channarayapatna ದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ನೇತೃತ್ವದಲ್ಲಿ ವಿಶೇಷ ಪೂಜೆ, ಸಿಹಿ ವಿತರಣೆ ಹಾಗೂ ಸರ್ಕಾರಿ ಆಸ್ಪತ್ರೆಗೆ ಟಿವಿ ಕೊಡುಗೆ ನೀಡಲಾಯಿತು.
ಚನ್ನರಾಯಪಟ್ಟಣ,ಮೇ,18,2026(www.kannadapost.com): ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರ 94 ನೇ ಹುಟ್ಟು ಹಬ್ಬದ ಅಂಗವಾಗಿ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಶ್ರವಣಬೆಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಸೋಮವಾರ ದಂದು 40 ಅಡಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ಹಚ್ಚಲಾಯಿತು. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ರೋಗಿಗಳ ಮನರಂಜನೆಗಾಗಿ ಟಿವಿಯನ್ನು ಕೊಡುಗೆಯಾಗಿ ನೀಡಿ, ಇಲ್ಲಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ ಮಾಡಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರ ಸಾರ್ವಜನಿಕ ಬದುಕು ರಾಜಕಾರಣವನ್ನೂ ಮೀರಿದ ಕ್ಷಮತೆ, ದೂರದರ್ಶಿತ್ವ, ವಿನಮ್ರತೆ, ರೈತ ಪರ ಚಿಂತನೆಯ ಪಯಣವಾಗಿದೆ ಎಂದರು. ದೇವೇಗೌಡರು ನಮ್ಮ ರಾಜ್ಯದ ಹೆಮ್ಮೆಯ ಮಣ್ಣಿನ ಮಗನಾಗಿದ್ದಾರೆ. ಅವರು ರೈತನ ಬದುಕಿನ ಕಷ್ಟಗಳು ಚೆನ್ನಾಗಿ ಅರಿತವರಾಗಿದ್ದರಿಂದ, ಬಡ ರೈತರು, ಸೌಲಭ್ಯ ವಂಚಿತರು ಹಾಗೂ ಸಮಾಜದ ದುರ್ಬಲ ವರ್ಗಗಳ ಒಳಿತಿಗಾಗಿ ತಾವೊಬ್ಬ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕೆಳಸ್ತರದಿಂದ ಆರಂಭಿಸಿದ ಇವರ ಹೋರಾಟದ ಬದುಕು ರಾಜಕೀಯ ರಂಗದಲ್ಲಿ ಗಮನ ಸೆಳೆಯಿತು ಎಂದು ತಿಳಿಸಿದರು. ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಗ್ರಾಮೀಣ ಭಾಗ ಮತ್ತು ಕೃಷಿ ವಲಯಕ್ಕೆ ಬಜೆಟ್ನಲ್ಲಿ ಸಿಂಹಪಾಲು ನೀಡಿ ಆರ್ಥಿಕತೆ ಗಟ್ಟಿಗೊಳಿಸಿದರು.
ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಪ್ರಸ್ತಾಪ ಮಾಡಿದ ಮೊದಲ ಪ್ರಧಾನಿ ಎನ್ನುವ ಹಿರಿಮೆ ಅವರದ್ದು. ಕೃಷಿ, ನೀರಾವರಿ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಅವರು ಮಾತನಾಡುತ್ತಾರೆಂದರೆ ಇಡೀ ದೇಶವೇ ಅದನ್ನು ಕಿವಿಗೊಟ್ಟು ಆಲಿಸುತ್ತದೆ ಎಂದರು. ಅಬಿವೃದ್ಧಿಯ ಹರಿಕಾರ, ಎಚ್.ಡಿ. ದೇವೇಗೌಡರು ಮಾಡಿರುವ ಉತ್ತಮವಾದ ಕೆಲಸಗಳು ಸಾಕಷ್ಟಿವೆ. ಅವರು ಮಾಡಿರುವ ಕೆಲಸ ಕಾರ್ಯಗಳಿಗೆ ರಾಜ್ಯದ ಹಾಗೂ ದೇಶದ ಜನತೆಯ ಆರ್ಶೀವಾದ ಇದೆ. ಇವರ ಸೇವೆ ದೇಶಕ್ಕೆ ಇನ್ನೂ ಹೆಚ್ಚಿನ ಅವಶ್ಯಕತೆ ಇರುವುದರಿಂದ ಹಾಗೂ ದೇಶದ ರೈತರಿಗೆ ಸಾರ್ವಜನಿಕರಿಗೆ, ನಿರ್ಗತಿಕರ ಪರವಾಗಿ ಇನ್ನೂ ಹಲವು ಅಬಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಲು ದೇವರು ಅವರಿಗೆ ಆಯಸ್ಸು, ಆರೋಗ್ಯ, ಶಕ್ತಿ ಕೊಡಲಿ.
ಇಂತಹ ಮುತ್ಸದ್ಧಿಯಾದ ಗೌಡರು ಶತಾಯುಷಿಗಳಾಗಿ, ಜಗತ್ತಿನ ಅತ್ಯಂತ ಪರಮೋಚ್ಚ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲವಾದ ರಾಜ್ಯಸಭೆಯಲ್ಲಿ ತಮ್ಮ ಧ್ವನಿ ಮೊಳಗಿಸುತ್ತಿರಲಿ ಎಂಬುದು ಪ್ರತಿಯೊಬ್ಬರ ಆಸೆ ಎಂದು ಶುಭ ಕೋರಿದರು.
ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಪರಮ ದೇವರಾಜೇಗೌಡ, ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಟೇಶ್ ಮೂರ್ತಿ, ನಿರ್ದೇಶಕರಾದ ಎಂ.ಆರ್.ಅನಿಲ್ ಕುಮಾರ್, ಕುಂಬಾರಹಳ್ಳಿ ರಮೇಶ್, ರವಿ, ಉಮೇಶ್, ಪರಮ ಕೃಷ್ಣೇಗೌಡ, ನಂಜುಂಡೇಗೌಡ, ನೆಟ್ಟೆಕೆರೆ ನಾಗರಾಜು, ನವೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಜೆ.ಮಂಜುನಾಥ್, ಮುಖಂಡರಾದ ಚಿಕ್ಕಬಿಳ್ತಿ ಗಂಗಾಧರ್, ಜಯಣ್ಣ, ಮೋಹನ್ ಕುಮಾರ್, ಅಡಗೂರು ನಾರಾಯಣಿ, ಅಪ್ಸರ್, ಬಾಳೆಮಂಡಿ ಸುರೇಶ್, ರಾಜು, ಕೃಷ್ಣ, ರಾಮು, ಸತ್ಯನಾರಾಯಣ, ಅಪ್ಸರ್, ಡಾ.ಯುವರಾಜ್ ಸೇರಿ ಇತರರು ಇದ್ದರು.









