
ಎಸ್ಎಸ್ಎಲ್ಸಿ ಮರು ಮೌಲ್ಯಮಾಪನ ಫಲಿತಾಂಶದಲ್ಲಿ 622 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಗಳಿಸಿದ ಸಕಲೇಶಪುರದ (sakleshpur) ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನವಮಿ ಎಸ್.ಎಸ್ ಅವರಿಗೆ ಶಾಸಕ ಸಿಮೆಂಟ್ ಮಂಜು ಅಭಿನಂದನೆ ಸಲ್ಲಿಸಿದರು.
ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ನವಮಿಗೆ ಶಾಸಕ ಸಿಮೆಂಟ್ ಮಂಜು ಅಭಿನಂದನೆ
ಸಕಲೇಶಪುರ,ಮೇ,18,2026(www.kannadapost.com): ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನ ಫಲಿತಾಂಶದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಪಟ್ಟಣದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನವಮಿ ಎಸ್.ಎಸ್. ಅವರಿಗೆ ಶಾಸಕ ಸಿಮೆಂಟ್ ಮಂಜು ಅಭಿನಂದನೆ ಸಲ್ಲಿಸಿದರು. ಪಟ್ಟಣದ ಪತ್ರಕರ್ತ ಸುಧೀರ್ ಎಸ್.ಎಲ್. ಹಾಗೂ ಶಿಕ್ಷಕಿ ಮೇಘ ಜಿ.ಎನ್. ದಂಪತಿಗಳ ಪುತ್ರಿಯಾಗಿರುವ ನವಮಿ, ಆರಂಭಿಕ ಫಲಿತಾಂಶದಲ್ಲಿ 618 ಅಂಕಗಳನ್ನು ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಳು.
ಬಳಿಕ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ಇದೀಗ 622 ಅಂಕಗಳನ್ನು ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದು ಗಮನ ಸೆಳೆದಿದ್ದಾಳೆ. ಕಳೆದ ಏಪ್ರಿಲ್ 23ರಂದು ಪ್ರಕಟವಾದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ನಾಲ್ಕು ಅಂಕಗಳ ಹೆಚ್ಚಳದೊಂದಿಗೆ ಮರು ಮೌಲ್ಯಮಾಪನದಲ್ಲಿ ಸಾಧನೆ ಮೆರೆದಿರುವ ನವಮಿ, ಯಾವುದೇ ಖಾಸಗಿ ಟ್ಯೂಷನ್ಗೆ ತೆರಳದೆ ಶಾಲೆಯಲ್ಲಿಯೇ ಪಾಠ ಆಲಿಸಿ ಪರಿಶ್ರಮದ ಮೂಲಕ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.
ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜು, ನವಮಿಗೆ ಅಭಿನಂದನೆ ಸಲ್ಲಿಸಿ ಮುಂದಿನ ವಿದ್ಯಾಭ್ಯಾಸದಲ್ಲಿಯೂ ಇದೇ ರೀತಿ ಸಾಧನೆ ಮುಂದುವರಿಸಿ ತಾಲೂಕಿಗೆ ಮತ್ತಷ್ಟು ಕೀರ್ತಿ ತಂದುಕೊಡಲಿ ಎಂದು ಶುಭ ಹಾರೈಸಿದರು









