Hassan: ಬೇಲೂರಿನಲ್ಲಿ ಸ್ಟಾರ್ಟ್ ಆಗದ ಕದ್ದ ಬೈಕ್; ಸಿಟ್ಟಿನಲ್ಲಿ ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾದ ದುಷ್ಕರ್ಮಿಗಳು!

ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಹೊಳೆಬೀದಿಯಲ್ಲಿ ಕಳ್ಳತನ ಯತ್ನ ವಿಫಲವಾದ ಕಾರಣ, ದುಷ್ಕರ್ಮಿಗಳು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟು ಪರಾರಿಯಾಗಿದ್ದಾರೆ. ಸಂಪೂರ್ಣ ವರದಿ ಓದಿ.

Hassan|ಹಾಸನ: ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ಕಳ್ಳತನ ಮಾಡಲು ಯತ್ನಿಸಿದ ದುಷ್ಕರ್ಮಿಗಳು, ಬೈಕ್ ಸ್ಟಾರ್ಟ್ ಆಗದ ಕಾರಣ ಸಿಟ್ಟಿನಲ್ಲಿ ಒಂದು ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ.

​ಬೇಲೂರು ಪಟ್ಟಣದ ಹೊಳೆಬೀದಿಯಲ್ಲಿ ಈ ಘಟನೆ ನಡೆದಿದ್ದು, ಸಂಪೂರ್ಣ ಸುಟ್ಟು ಕರಕಲಾಗಿರುವ ಬೈಕ್ ಹಾಗೂ ಬಿಟ್ಟುಹೋದ ಮತ್ತೊಂದು ಬೈಕ್ ಸ್ಥಳೀಯ ನಿವಾಸಿ ಚಂದ್ರಶೇಖರ್ ಎಂಬುವವರಿಗೆ ಸೇರಿದ್ದಾಗಿದೆ.

​ಘಟನೆಯ ವಿವರ:

​ಚಂದ್ರಶೇಖರ್ ಅವರು ತಮ್ಮ ಮನೆಯ ಮುಂದೆ ಎರಡು ಬೈಕ್‌ಗಳನ್ನು ನಿಲ್ಲಿಸಿದ್ದರು. ತಡರಾತ್ರಿ ಈ ಬೈಕ್‌ಗಳನ್ನು ಕಳ್ಳತನ ಮಾಡುವ ಉದ್ದೇಶದಿಂದ ಬಂದಿದ್ದ ಚೋರರು, ವಾಹನಗಳನ್ನು ಕದಿಯಲು ಸಂಚು ರೂಪಿಸಿದ್ದಾರೆ. ಎರಡು ಬೈಕ್‌ಗಳನ್ನು ಮನೆಯಿಂದ ಸ್ವಲ್ಪ ದೂರದವರೆಗೆ ತಳ್ಳಿಕೊಂಡು ಹೋಗಿದ್ದಾರೆ.

​ಆದರೆ, ಎಷ್ಟೇ ಪ್ರಯತ್ನಿಸಿದರೂ ಬೈಕ್ ಸ್ಟಾರ್ಟ್ ಆಗಿಲ್ಲ. ಇದರಿಂದ ಹತಾಶರಾದ ಕಿಡಿಗೇಡಿಗಳು, ಸಿಟ್ಟಿನಲ್ಲಿ ಒಂದು ಬೈಕ್‌ಗೆ ಬೆಂಕಿ ಹಚ್ಚಿ ಸಂಪೂರ್ಣವಾಗಿ ಸುಟ್ಟು ಹಾಕಿದ್ದಾರೆ. ಮತ್ತೊಂದು ಬೈಕನ್ನು ಬೇಲೂರಿನ ವಿಷ್ಣು ಗಾರ್ಡನ್ ಬ್ರಿಡ್ಜ್ (ಸೇತುವೆ) ಮೇಲೆ ಹಾಗೆಯೇ ಬಿಟ್ಟು ಪರಾರಿಯಾಗಿದ್ದಾರೆ.

​ಬೆಳಗ್ಗೆ ಎದ್ದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಬೈಕ್ ಮಾಲೀಕರು ಹಾಗೂ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಘಟನಾ ಸ್ಥಳಕ್ಕೆ ಬೇಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.