ನವದೆಹಲಿ: ಹಾಸನ ಜಿಲ್ಲೆ ಕಾರೆಕೆರೆ ಕೃಷಿ ಮಹಾವಿದ್ಯಾಲಯ ಹಾಗೂ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಯುಎಎಸ್) ವ್ಯಾಪ್ತಿಯಲ್ಲಿ ಹೆಚ್ಚುವರಿ ಹಾಸ್ಟೆಲ್ ನಿರ್ಮಾಣ ಮತ್ತು ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು ಮತ್ತು ಕಾರೆಕೆರೆ ಕೃಷಿ ಕಾಲೇಜುಗಳು ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಹಲವು ದಶಕಗಳಿಂದ ಕೃಷಿ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ ಈ ಸಂಸ್ಥೆಗಳು ಮಳೆಯಾಶ್ರಿತ ಹವಾಮಾನಕ್ಕೆ ಹೊಂದುವ, ಹೆಚ್ಚಿನ ಇಳುವರಿ ನೀಡುವ ಬೆಳೆ ಜಾತಿಗಳನ್ನು ಅಭಿವೃದ್ಧಿಪಡಿಸಿದ್ದು, ನೀರಾವರಿ ಮತ್ತು ಪರಿಸರ ವ್ಯವಸ್ಥೆಗಳ ಕ್ಷೇತ್ರದಲ್ಲೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಗಳಿಸಿವೆ.
ಪ್ರಸ್ತುತ ಈ ಸಂಸ್ಥೆಗಳಲ್ಲಿ 3,499 ಪದವಿಪೂರ್ವ, 746 ಸ್ನಾತಕೋತ್ತರ ಹಾಗೂ 279 ಡಾಕ್ಟರೇಟ್ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 4,524 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದಾಖಲಾತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್ ಸೌಲಭ್ಯಗಳ ಕೊರತೆ ತೀವ್ರವಾಗಿ ಕಾಣಿಸಿಕೊಂಡಿದೆ. ಸಮರ್ಪಕ ವಸತಿ ಇಲ್ಲದೆ ಹಲವರು ಕ್ಯಾಂಪಸ್ ಹೊರಗೆ ದುಬಾರಿ ಮತ್ತು ಅಸೌಕರ್ಯಕರ ವಸತಿಗಳಲ್ಲಿ ತಂಗಬೇಕಾದ ಪರಿಸ್ಥಿತಿ ಉಂಟಾಗಿದೆ.
ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಉತ್ತಮ ಶೈಕ್ಷಣಿಕ ವಾತಾವರಣಕ್ಕಾಗಿ ಹೆಚ್ಚುವರಿ ಹಾಸ್ಟೆಲ್ಗಳು ಅಗತ್ಯವೆಂದು ದೇವೇಗೌಡರು ತಿಳಿಸಿದ್ದಾರೆ. ವಿಶೇಷವಾಗಿ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದು ನೆರವಾಗಲಿದೆ ಎಂದು ಹೇಳಿದ್ದಾರೆ.
ಸುಸ್ಥಿರ ಕೃಷಿ ಉತ್ಪಾದನೆಗೆ ಗುಣಮಟ್ಟದ ಬೀಜವೇ ಅಡಿಪಾಯವಾಗಿದ್ದು, ಬೀಜದಿಂದ ಹರಡುವ ರೋಗಗಳನ್ನು ತಡೆಯಲು ವೈಜ್ಞಾನಿಕ ಪರೀಕ್ಷೆ ಅಗತ್ಯವಾಗಿದೆ. ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಕೀಟ ಮತ್ತು ರೋಗಗಳ ಪ್ರಮಾಣ ಹೆಚ್ಚುತ್ತಿರುವುದರಿಂದ ಸುಸಜ್ಜಿತ ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯದ ಅಗತ್ಯತೆ ತುರ್ತಾಗಿದೆ.
ಈ ಪ್ರಯೋಗಾಲಯವು ಬೀಜದಿಂದ ಹರಡುವ ರೋಗಕಾರಕಗಳನ್ನು ಪತ್ತೆಹಚ್ಚಿ, ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣ ಪ್ರಮಾಣೀಕರಣಕ್ಕೆ ನೆರವಾಗಲಿದೆ. ಜೊತೆಗೆ ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ಕ್ಷೇತ್ರ ಸಿಬ್ಬಂದಿಗೆ ತರಬೇತಿ ಹಾಗೂ ಸಂಶೋಧನಾ ಸೌಲಭ್ಯ ಒದಗಿಸಲಿದೆ.
ವಿಶ್ವಾಸಾರ್ಹ ಮತ್ತು ಸಮಯೋಚಿತ ಪರೀಕ್ಷೆಯ ಮೂಲಕ ರೈತರು, ಬೀಜ ಉತ್ಪಾದಕರು ಹಾಗೂ ಕೃಷಿ ಉದ್ಯಮಿಗಳಿಗೆ ಗುಣಮಟ್ಟದ ಬೀಜ ಲಭ್ಯವಾಗಲಿದ್ದು, ಬೆಳೆ ಇಳುವರಿ ಹೆಚ್ಚಿಸಲು ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಗುರಿ ಸಾಧಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ ಯುಎಎಸ್ ಹಾಗೂ ಹಾಸನ ಜಿಲ್ಲೆಯ ಕಾರೆಕೆರೆಯಲ್ಲಿ ಯುಜಿ ಬಾಲಕರು ಮತ್ತು ಬಾಲಕಿಯರ ಹಾಸ್ಟೆಲ್ ನಿರ್ಮಾಣ ಹಾಗೂ ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗೆ ಅಗತ್ಯ ಅನುದಾನ ಮಂಜೂರು ಮಾಡುವಂತೆ ದೇವೇಗೌಡರು ಮನವಿ ಮಾಡಿದ್ದಾರೆ. ಈ ವೇಳೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಉಪಸ್ಥಿತರಿದ್ದರು.
ಅನುದಾನದ ವಿವರ:
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪಿಜಿ ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ – ₹18.75 ಕೋಟಿ
ಕಾರೆಕೆರೆಯಲ್ಲಿ ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯಕ್ಕೆ – ₹10 ಕೋಟಿ
ಯುಜಿ ಬಾಲಕರ ಹಾಸ್ಟೆಲ್ಗೆ – ₹10 ಕೋಟಿ
ಯುಜಿ ಬಾಲಕಿಯರ ಹಾಸ್ಟೆಲ್ಗೆ – ₹10 ಕೋಟಿ
ಒಟ್ಟು: ₹48.75 ಕೋಟಿ ಬಿಡುಗಡೆಗೆ ಶಿಫಾರಸು.










