ಚನ್ನರಾಯಪಟ್ಟಣ: ಹಾಸನ ಹಾಗೂ ಚನ್ನರಾಯಪಟ್ಟಣದ ಕಡೆಗೆ ಶನಿವಾರ ಬೆಳಗ್ಗೆ 10 ಗಂಟೆ ತನಕ ಬಸ್ಸುಗಳ ಸಂಚಾರ ಇಲ್ಲದ ಕಾರಣ ತಾಲ್ಲೂಕಿನ ಹಿರೀಸಾವೆಯ ಶ್ರೀಕಂಠಯ್ಯ ವೃತ್ತದಲ್ಲಿ ವಿದ್ಯಾರ್ಥಿಗಳು, ನೌಕರರು ಹಾಗೂ ಸಾರ್ವಜನಿಕರು ಬಸ್ಸುಗಳಿಗಾಗಿ ಗಂಟೆಗಟ್ಟಲೆ ಕಾಯಬೇಕಾಯಿತು.
ಹಿರೀಸಾವೆಯ ಶ್ರೀಕಂಠಯ್ಯ ವೃತ್ತದಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ನೂರಾರು ನೌಕರರು ಚನ್ನರಾಯಟಪಟ್ಟಣ, ಹಾಸನಕ್ಕೆ ಪ್ರಯಾಣ ಮಾಡುತ್ತಾರೆ.
ಪ್ರತಿದಿನ 5 ನಿಮಿಷಕ್ಕೆ ಒಂದು ಬಸ್ ಹಾಸನ ಕಡೆಗೆ ಸಂಚರಿಸುತ್ತವೆ, ಆದರೆ ಶನಿವಾರ ಗಂಟೆಗೊಂದು ಬಸ್ ಎನ್ಎಚ್ 75 ರಲ್ಲಿ ಬರಲಿಲ್ಲ. ಬೆಳಗ್ಗೆ 7 ಕ್ಕೆ ನಿಲ್ದಾಣಕ್ಕೆ ಬಂದವರಿಗೆ 9 ಗಂಟೆಯಾದರು ಬಸ್ ಇಲ್ಲದ ಪರಿಣಾಮ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳು ಶನಿವಾರದ ಬೆಳಗ್ಗಿನ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಲು ಸಾಧ್ಯವಾಗಲಿಲ್ಲ.
ಕೆಲವರು ಆಟೋ ಮತ್ತು ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡಿದರು. ನೌಕರರು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗಲು ಆಗದೆ ಬಸ್ ಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದರು.
ಸದ್ಯ 9.30ರ ನಂತರ ಆಗೊಂದು–ಈಗೊಂದು ಬಸ್ ಗಳು ಬಂದವು, ಅವುಗಳು ಅಲ್ಲಿಂದಲೇ ಪ್ರಯಾಣಿಕರಿಂದ ತುಂಬಿದ್ದವು. ನೂಕುನುಗ್ಗಲಿನಲ್ಲಿ ಕೆಲವರು ಬಸ್ ಹತ್ತಿದರೇ, ವೃದ್ಧರು, ರೋಗಿಗಳು ಬಸ್ ಹತ್ತಲಾಗದೆ ಇಲ್ಲೆ ಉಳಿಯಬೇಕಾಯಿತು.










