ಆಲೂರು: ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಬೆಂಗಳೂರು ವತಿಯಿಂದ, ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಸಮ್ಮೇಳನದ ಅಂಗವಾಗಿ “ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ”ಯನ್ನು ಮಡಬಲು ಗ್ರಾಮದ ನಿವಾಸಿ ಶಿಕ್ಷಕ ಹಾಗೂ ಸಾಹಿತಿ ಎಂ. ಜಿ. ಪರಮೇಶ್ ಮಡಬಲು ಅವರಿಗೆ ನೀಡಲಾಯಿತು.
ಎಂ.ಜಿ. ಪರಮೇಶ್ ರವರು ಪ್ರಸ್ತುತ ಹೊಳೆನರಸೀಪುರ ಬಿ.ಆರ್.ಸಿ. ಕೇಂದ್ರದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಸಮ್ಮೇಳನ ಹಾಗೂ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಕುರಿತ ವಿಚಾರ ಸಂಕೀರ್ಣದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಿ.ಸೋಮಶೇಖರ್ ಪ್ರಶಸ್ತಿ ಪ್ರದಾನ ಮಾಡಿದರು.
ಶ್ರೀ ಮೋಟಗಿ ಮಠದ ಪ್ರಭುಚನ್ನಬಸವ ಮಹಾ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ.ಎನ್.ಸಂತೋಷ್ ಹೆಗ್ಡೆ, ವಿಶ್ವೇಶ್ವರಯ್ಯ ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಸುರ್ವೆ, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಜಿ. ನಂಜಯ್ಯನಮಠ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಎಸ್. ಮುತ್ತುರಾಜ್, ಸಾಹಿತಿ ಡಾ.ರಾಜೇಂದ್ರ ಎಸ್. ಗಡಾದ, ಚಲನಚಿತ್ರ ಕಲಾವಿದರಾದ ಶಂಕರಭಟ್, ಮೀನಾ, ಗಣೇಶರಾವ್ ಉಪಸ್ಥಿತರಿದ್ದರು.










