ಹಾಸನ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಾವಿರ ರೂ. ಟಿಕೆಟ್ ಖರೀದಿಸಿ ಭಕ್ತರೊಂದಿಗೆ ಸರದಿ ಸಾಲಿನಲ್ಲಿ ಬಂದು ದೇವಿ ದರ್ಶನ ಪಡೆದರು.ರಾತ್ರಿ 8 ಗಂಟೆಗೆ ನಗರಕ್ಕೆ ಆಗಮಿಸಿದ ಅವರು ಕುಟುಂಬಸ್ಥರು ಹಾಗೂ ಆಪ್ತ ಸಹಾಯಕರಿಗೆ ಸಾವಿರ ರೂ. ಟಿಕೆಟ್ ಖರೀದಿಸಿ ಸರದಿ ಸಾಲಿನಲ್ಲಿ ಹೆಜ್ಜೆ ಹಾಕಿದರು.
ಈ ವೇಳೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮೊಹಮದ್ ಸುಜೀತಾ ಅವರು ಸರದಿ ಸಾಲಿನಲ್ಲೇ ಬ್ಯಾರಿಕೇಡ್ ತೆರೆದು ದಾರಿ ಮಾಡಿಕೊಡುವುದಾಗಿ ಹೇಳಿದರಾದರೂ, ಹಾಸನಾಂಬ ತಾಯಿ ಮುಂದೆ ಎಲ್ಲರೂ ಒಂದೇ.ಜನರೊಂದಿಗೆ ಹೋಗುತ್ತೇನೆಂದು ಸಾಗಿದರು.
ಅರ್ಧ ದಾರಿ ಕ್ರಮಿಸಿದ ಮೇಲೆ ಜನದಟ್ಟಣೆ ಹೆಚ್ಚಾಗಿ ಸಚಿವರು ನಿಂತಿದ್ದ ಸಾಲು ಮುಂದೆ ಸಾಗದೆ ನಿಲ್ಲಬೇಕಾಯಿತು. ಈ ವೇಳೆ ಜನರನ್ನು ಪಕ್ಕಕ್ಕೆ ಸರಿಸಲು ಪೊಲೀಸರು ಮುಂದಾದಾಗ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಚಿವರು ಜನರೊಂದಿಗೆ ಹೆಜ್ಜೆ ಹಾಕಿದರು.










