ಹಾಸನ: ಬಸವಣ್ಣ ಅವರ ತತ್ವಗಳಿಂದ ಹುಟ್ಟಿಕೊಂಡು 9೦೦ ವರ್ಷಗಳ ಇತಿಹಾಸ ಹೊಂದಿರುವ ಲಿಂಗಾಯತ ಧರ್ಮಕ್ಕೆ ಇನ್ನೂ ಸ್ವತಂತ್ರ ಧರ್ಮದ ಮಾನ್ಯತೆ ದೊರಕಿಲ್ಲ. ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳಿಗೆ ಭಾರತ ಸರ್ಕಾರ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡಿ ವಿಶೇಷ ಸೌಲಭ್ಯ ಒದಗಿಸಿದರೂ, ಲಿಂಗಾಯತರಿಗೆ ಅದೇ ನ್ಯಾಯ ದೊರಕದಿರುವುದು ಬೇಸರದ ವಿಷಯ ಎಂದು ಜಿಲ್ಲಾ ಲಿಂಗಾಯತ ಸಂಘದ ಉಪಾಧ್ಯಕ್ಷ ಭುವನಾಕ್ಷ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಲಿಂಗಾಯತ ಧರ್ಮವು ತನ್ನದೇ ಆದ ಆಚರಣೆ, ನಂಬಿಕೆ, ತತ್ವಶಾಸ್ತç ಹೊಂದಿರುವ ಪ್ರತ್ಯೇಕ ಧರ್ಮ. ಆದರೆ ಇನ್ನೂ ಹಿಂದೂ ಧರ್ಮದ ಅಂಗವೆಂದು ಪರಿಗಣಿಸಲಾಗುತ್ತಿದೆ. ಇದರಿಂದಾಗಿ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸೌಲಭ್ಯಗಳು ಸಿಗದೆ ಅನ್ಯಾಯವಾಗಿದೆ.
ನಮ್ಮ ಹೋರಾಟ ಯಾವ ಧರ್ಮ, ಜಾತಿ ಅಥವಾ ಪಕ್ಷದ ವಿರುದ್ಧವಲ್ಲ. ಇದು ಸಮಾಜದ ಹಕ್ಕುಗಳನ್ನು ಪಡೆಯುವ ಹೋರಾಟ ಎಂದು ಸ್ಪಷ್ಟಪಡಿಸಲಾಗಿದೆ. ಲಿಂಗಾಯತ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗಾಯತ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ಮೀಸಲಾತಿ, ವಿದ್ಯಾರ್ಥಿವೇತನ ಹಾಗೂ ಶುಲ್ಕ ವಿನಾಯತಿ. ಬಡ ಕುಟುಂಬಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ನಿಧಿಯಿಂದ ಸಾಲ, ಸಬ್ಸಿಡಿ ಹಾಗೂ ಉದ್ಯೋಗ ತರಬೇತಿ. ಮಠ, ಮಂದಿರ, ಗದ್ದುಗೆಗಳ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರದ ನೆರವು ಅಗತ್ಯ ಎಂದರು.
ಬಸವಣ್ಣ ಅವರ ಮಾನವೀಯ ತತ್ವಗಳನ್ನು ಪಠ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಗೆ ಕಲಿಸುವ ಅವಕಾಶಬೇಕು. ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ದೊರೆತರೆ ದೇಶದ ಐಕ್ಯತೆಗೆ ಯಾವುದೇ ಹಾನಿಯಾಗುವುದಿಲ್ಲ. ಬದಲಿಗೆ ಬಸವಣ್ಣ ಅವರ ತತ್ವಗಳು ಮಾನವ ಘನತೆ, ಸಮಾನತೆ, ಕಾಯಕದ ಮಹತ್ವ, ದಾಸೋಹ, ವಿಶ್ವ ಬಾಂಧವ್ಯ ಇವೆಲ್ಲ ಜಗತ್ತಿನ ಮಟ್ಟದಲ್ಲಿ ಪ್ರಸಾರವಾಗಿ ಭಾರತದ ಹೆಮ್ಮೆ ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ದೊರೆತರೆ ಧಾರ್ಮಿಕ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆಗಳು ಸಾಧ್ಯವೆಂದು ಲಿಂಗಾಯತ ಮಹಾಸಭೆ ತಿಳಿಸಿದೆ. ಮಹಾಸಭೆಯ ಪ್ರಕಾರ ಪಂಚಾಚಾರ್ಯರು ಹಾಗೂ ವೈದಿಕ ಪುರೋಹಿತ ಶಾಹಿಯು ಬಸವ ಧರ್ಮವನ್ನು ನಾಶಪಡಿಸಲು ಹಲವಾರು ಪ್ರಯತ್ನ ಮಾಡಿದರೂ ಯಶಸ್ವಿಯಾಗಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ಲತೇಶ್ ಕುಮಾರ್, ವೀರಶೈವ ಜಾಗತಿಕ ಲಿಂಗಾಯಿತ ಸಂಘದ ಅಧ್ಯಕ್ಷ ಒಂಬೇಶ್ ಇದ್ದರು.










