ಹಾಸನ: ನಗರದ ಹಾಸನಾಂಬೆ ದೇವಾಲಯದ ರಸ್ತೆ, ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಸಹಯೋಗ, ವೇದ ಭಾರತೀ ಹಾಗೂ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ ಸಮಿತಿ ಸಹಯೋಗದಲ್ಲಿ ಅ.5ರ ಭಾನುವಾರದಂದು ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಅಗ್ನಿಹೋತ್ರ ಮತ್ತು ಅಗ್ನಿಹೋತ್ರ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಯೋಗ ಪೀಠದ ರಾಜ್ಯ ಯಜ್ಞ ಪ್ರಭಾರಿ ಮತ್ತು ವೇದ ಭಾರತಿಯ ರಾಜ್ಯ ಸಂಯೋಜಕ ಹರಿಹರಪುರ ಶ್ರೀಧರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಪ್ರಮುಖವಾಗಿ ಎಲ್ಲರಿಗಾಗಿ ಯೋಗ, ಎಲ್ಲರಿಗಾಗಿ ಯಜ್ಞ, ಎಲ್ಲರಿಗೂ ಆರೋಗ್ಯ ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಅಗ್ನಿಹೋತ್ರವು ಪುರಾತನ ಯಜ್ಞ ವಿಧಾನವಾಗಿದ್ದು, ವಾತಾವರಣ ಶುದ್ಧೀಕರಣ, ಮಾನಸಿಕ ಶಾಂತಿ, ದೈಹಿಕ ಆರೋಗ್ಯ ಹಾಗೂ ಸಾಮಾಜಿಕ ಏಕತೆಗಾಗಿ ಬಹುಮುಖ್ಯವಾಗಿದೆ. ಸಾಮೂಹಿಕ ಅಗ್ನಿಹೋತ್ರದ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾದ ಚೈತನ್ಯ ವಾತಾವರಣ ಸೃಷ್ಟಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಭಾರಿ ವರಿಷ್ಠ ಭವರಲಾಲ್ ಆರ್ಯ, ಪತಂಜಲಿ ಯೋಗಪೀಠ ಕರ್ನಾಟಕ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹಾಸನ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಬಿ.ಹೆಚ್. ವಿಶ್ವನಾಥ ಶ್ರೇಷ್ಠಿ ಅಧ್ಯಕ್ಷತೆ ವಹಿಸಲಿದ್ದಾರೆ.
ಅಗ್ನಿಹೋತ್ರದಲ್ಲಿ ಭಾಗವಹಿಸುವವರಿಗೆ ವಸ್ತ್ರ ಸಂಹಿತೆ ಇದೆ. ಪುರುಷರು ಬಿಳಿ ಪಂಚೆ-ಶಲ್ಯ ಹಾಗೂ ಮಹಿಳೆಯರು ಹಳದಿ ಸೀರೆ, ಕೆಂಪು ರವಿಕೆ ಧರಿಸಬೇಕೆಂದು ಸೂಚಿಸಲಾಗಿದೆ. ಅಗತ್ಯವಿದ್ದಲ್ಲಿ ಯಾವುದೇ ಭಾರತೀಯ ಸಾಂಪ್ರದಾಯಿಕ ಉಡುಗೆ ಧರಿಸಬಹುದಾಗಿದೆ.
ಅಗ್ನಿಹೋತ್ರ ನಡೆಸಲು ಅಗತ್ಯವಿರುವ 650 ಮೌಲ್ಯದ ಸೆಟ್ನ್ನು ವಿಶೇಷ ರಿಯಾಯಿತಿ ದರದಲ್ಲಿ 5೦೦ಕ್ಕೆ ಕಾರ್ಯಕ್ರಮದ ಸ್ಥಳದಲ್ಲೇ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸುವವರು ಬೆಳಿಗ್ಗೆ ಗಂಟೆಯೊಳಗೆ 8 ಸ್ಥಳಕ್ಕೆ ಆಗಮಿಸುವಂತೆ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ 789294೦೦96 ನಂಬರ್ ಸಂಪರ್ಕಿಸಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪತಂಜಲಿ ಯೋಗ ಪರಿವಾರ ಜಿಲ್ಲಾ ಸಂರಕ್ಷಕ ಲೋಕನಾಥ್, ಮಹಿಳಾ ಜಿಲ್ಲಾ ಪ್ರಭಾರಿ ಶಾರದ ಧರ್ಮಾನಂದ್, ಹೇಮಂತ್ ಕುಮಾರ್, ಯೋಗಾ ಪಟು ನಾಗರಾಜು ಇದ್ದರು.










