ಹಾಸನ, ಆಗಸ್ಟ್ 26, 2025: ಧರ್ಮಸ್ಥಳಕ್ಕೆ ಸಂಬಂಧಿಸಿದ ವಿವಾದದ ಬಗ್ಗೆ ಬಿಜೆಪಿಯ ಹೋರಾಟವನ್ನು ಖಂಡಿಸಿರುವ ಕಂದಾಯ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಅವರು, ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಭಾವನಾತ್ಮಕ ವಿಷಯಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಸಚಿವರ ಹೇಳಿಕೆ: ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೃಷ್ಣ ಭೈರೇಗೌಡ, “ಬಿಜೆಪಿಯವರಿಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಭಾವನಾತ್ಮಕ ವಿಚಾರಗಳೇ ಸಿಗುತ್ತಿವೆ. ಸೌಜನ್ಯ ಪ್ರಕರಣದಲ್ಲಿ ಎಸ್ಐಟಿ ರಚನೆಗೆ ಒತ್ತಾಯಿಸಿ ಹೋರಾಟ ಮಾಡಿದ್ದು ಇವರೇ. ಈಗ ಊಸುರವಳ್ಳಿಯಂತೆ ಆಡುತ್ತಿದ್ದಾರೆ. ಇವರು ಡೋಂಗಿಗಳು,” ಎಂದು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ.
ಎಸ್ಐಟಿ ತನಿಖೆಯ ಬಗ್ಗೆ: ಸಚಿವರು ಎಸ್ಐಟಿ ತನಿಖೆಯನ್ನು ಸಮರ್ಥಿಸಿಕೊಂಡು, “ಎಸ್ಐಟಿ ಪ್ರಾಮಾಣಿಕವಾಗಿ ತನಿಖೆ ನಡೆಸಿದೆ. ಆದರೆ, ಬಿಜೆಪಿಯವರು ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಲು ಇವರಿಗೆ ಬೇರೆ ಯಾವ ವಿಷಯವೂ ಇಲ್ಲ. ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಈ ವಿಷಯ ಸಿಕ್ಕಿದೆ,” ಎಂದು ಕಿಡಿಕಾರಿದ್ದಾರೆ. ಮುಂದುವರೆದು, “ಗೃಹ ಸಚಿವರು ಈಗಾಗಲೇ ಅಚ್ಚುಕಟ್ಟಾದ ಹೇಳಿಕೆ ನೀಡಿದ್ದಾರೆ. ತನಿಖೆಯ ವರದಿ ಬರಲಿ, ಅದುವರೆಗೆ ಕಾಯೋಣ,” ಎಂದು ತಿಳಿಸಿದ್ದಾರೆ.










