ಕಳಸ: ಸಂಸೆಯ ಬಸ್ತಿಗದ್ದೆ ಪ್ರದೇಶದ ಯುವಕ ನಾಗೇಶ್ ಮೇಲೆ ಕುದುರೆಮುಖ ಪೊಲೀಸ್ ಸಿಬ್ಬಂದಿ ನಡೆಸಿರುವ ಹಲ್ಲೆ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ಕಳಸ ತಾಲ್ಲೂಕು ಹಸಲರ ಸಂಘದ ಅಧ್ಯಕ್ಷ ಲಿಂಗಪ್ಪ ನಂತೂರು ತಿಳಿಸಿದ್ದಾರೆ.
ಪೊಲೀಸ್ ಪೇದೆಯ ಹಲ್ಲೆ ಕಾರಣಕ್ಕೆ ಚಿಕ್ಕಮಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಶ್ ಅವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಜೊತೆ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. ಪರಿಶಿಷ್ಟ ಜಾತಿಯ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪೊಲೀಸ್ ಪೇದೆ ಸಿದ್ದೇಶ್ ಅವರನ್ನು ಬಂಧಿಸಬೇಕು, ಸೇವೆಯಿಂದ ವಜಾ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದೆ ಎಂದೂ ಲಿಂಗಪ್ಪ ತಿಳಿಸಿದರು.
ನಾಗೇಶ್ ಕಣ್ಣಿಗೆ ಬಹಳಷ್ಟು ಹಾನಿ ಆಗಿದ್ದು ಅನೇಕ ದಿನಗಳ ಚಿಕಿತ್ಸೆ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದಾರೆ.ಈ ಅನ್ಯಾಯದ ವಿರುದ್ಧ ನಮ್ಮ ಸಮುದಾಯ ಒಗ್ಗಟ್ಟಿನ ಹೋರಾಟ ನಡೆಸುತ್ತದೆ ಎಂದರು. ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಕುದುರೆಮುಖ ಪೊಲೀಸ್ ಕಾನ್ಸ್ಟೇಬಲ್ ಸಿದ್ದೇಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಮಾನತು ಮಾಡಿದ್ದಾರೆ. ಆದರೆ ಇನ್ನೂ ಹೆಚ್ಚಿನ ಕ್ರಮ ಆಗಬೇಕು.ತಪ್ಪಿದರೆ ನಾವು ಬೃಹತ್ ಹೋರಾಟ ನಡೆಸುತ್ತೇವೆ ಎಂದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯೆ ಆಶಾ ಸಂತೋಷ್, ಜಿಲ್ಲಾ ಸಂಘಟನಾ ಸಂಚಾಲಕ ಸಂತೋಷ್, ಜಿಲ್ಲಾ ಪ್ರಧಾನ ಸಂಚಾಲಕ ಮಂಜಯ್ಯ, ಪೂರ್ಣೇಶ್ ನಿಯೋಗದಲ್ಲಿ ಇದ್ದರು.










